Thursday, October 30, 2008

ಒಂದು ಹಬ್ಬದ ಸುತ್ತ



ಅಕ್ಟೋಬರ್ ತಿಂಗಳ ಕಡೆಯ ದಿನದಂದು ಹ್ಯಾಲೋವೀನ್ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಆಚರಿಸಿತ್ತಾರೆ. ಕೆಲ್ಟಿಕ್ ಜನಾಂಗದ ಸಂಹೇನ್ ಎಂಬ ಸುಗ್ಗಿಯ ಪರ್ವದಿಂದ ರೂಪುಗೊಂಡ ಹ್ಯಾಲೋವೀನ್,ಗ್ರಾಮ್ಯರಿಂದ ಮೊದಲು ಗೊಂಡು ನವನಾಗರೀಕರಿಗೂ ಹರಡಿದೆ. ಶೀತವಲಯದ ದೇಶಗಳಲ್ಲಿ ಚಳಿಗಾಲ ಪ್ರಾರಂಭವಾಗುವ ಮುನ್ನ ಕೃಷಿಕರು ಕೋಯ್ಲು ಮುಗಿಸಿ ಆಚರಿಸುವ ಧಾರ್ಮಿಕ ಪರ್ವವಿದಾಗಿತ್ತು. ಉತ್ತರ ಐರೋಪ್ಯ ಪ್ರಾಂತ್ಯಗಳಲ್ಲಿ ಇದನ್ನು ಹೊಸ ವರ್ಶವಾಗಿಯೂ ಆಚರಿಸುತ್ತಿದ್ದರು.ಗೇಲಿಕ್ ಜನಾಂಗದವರು ಈ ಪರ್ವದ ಸಮಯದಲ್ಲಿ ಪರ ಮತ್ತು ಅಪರ ಪ್ರಪಂಚದ ನಡುವಿನ ಅಂತರ ಮುರಿದುಬಿದ್ದು, ಭೂತ ಪ್ರೇತಗಳು ಧರೆಗೆ ಅವತರಿಸುತ್ತವೆ ಏನ್ನುವ ಪ್ರತೀತಿಯನ್ನು ಹೊಂದಿದ್ದರು.ಆದರಿಂದಲೆ ಉರುವಲ ಸಾಮಗ್ರಿಗಳನ್ನು ಸಂಗ್ರಹಿಸಿ ದಹಿಸುವುದು (bonfires), ಈ ಅತಿಮಾನುಷರನ್ನು ಪ್ರೇತಗಳನ್ನು ಸಂಹರಿಸಿ/ಶಾಂತಿಗೊಳಿಸುವ ಪ್ರತೀಕಗಳು ಈ ಪರ್ವದ ಆಚರಣಾ ವಿಧಾನಗಳಲ್ಲಿ ಒಳಹೊಕ್ಕವು. ಹ್ಯಾಲೋವೀನ್ ಸಂದರ್ಭದಲ್ಲಿ ಧಿಗಿಲೆಬ್ಬಿಸುವ ಮುಖವಾಡ ವಸ್ತ್ರ ವೇಶಭೂಷಣಗಳನ್ನು ಧರಿಸುವುದು ವಾಡಿಕೆಯಾಗಿದೆ.ಈ ದಿನ ಕುಂಬಳಕಾಯಿಯಿ ಒಳ ತಿರುಳನ್ನು ತೆರೆದು,ಒಂದು ಮಡಿಕೆಯೆ ಆಕೃತಿಯಲ್ಲಿ ಕಡಿದು,ಮುಖವಾಡ ಮಾಡಿ,ಮುಖವಾಡದ ಒಳಗೆ ಒಂದು ಮೋಂಭತ್ತಿಯನ್ನು ಹತ್ತಿಸುವುದನ್ನು ಕಾಣಬಹುದು.ಈ ಮುಖವಾಡಕ್ಕೆ ಜ್ಯಾಕ್-ಓ-ಲಾಂಟರ್ನ್ (Jack-O-Lantern)ಎಂದು ಹೆಸರು. ಈಡಿ ಆಚರಣೆಗೆ ಭಯದ ವಾತವರಣದ ಲೇಪವಿದ್ದರೂ,ಕೆಲ ಅಂಶಗಳನ್ನು ಗಮನಿಸಿದರೆ, ಈ ಹ್ಯಾಲೋವೀನ್ ಅನೇಕ ಭಾರತೀಯ ಪರ್ವಗಳ ಒಂದೊಂದು ಅಂಶಗಳನ್ನು ಒಳಗೊಂಡಿದೆ ಅನ್ನಿಸುತ್ತದೆ.

ಸುಗ್ಗಿಯ ಸಂದರ್ಭದಲ್ಲಿ ಆಚರಿಸುವ ಇದನ್ನು ಸಂಕ್ರಾಂತಿ ಎನ್ನೋಣವೇ. ಇಲ್ಲ, ದುಷ್ಟ ದಹನ ಮಾಡುವುದರಿಂದ ಇದನ್ನು ಹೋಳಿಕಾ ದಹನಕ್ಕೆ ಹೋಲಿಸಿ, ಹೋಳಿ ಎನ್ನೋಣವೇ? ಮನೆಗಳ ಮುಂದೆ ಕ್ಯಾಂಡಲ್ಲು ಗಳು ಕಂಗೊಳಿಸುವುದರಿಂದ ದೀಪಾವಳಿಗೆ ಹತ್ತಿರವಾದರೆ, ಚಿಣ್ಣರು ವಿಧ ವಿಧ ವಸ್ತ್ರಗಳನ್ನೊಳಗೊಂಡ ಫಾನ್ಸಿ ಡ್ರೆಸ್ ಧರಿಸುವುದರಿಂದ, ಕೃಷ್ಣಾಷ್ಟಮಿಯಂದು ರಾಧೆ-ಕೃಷ್ಣೆಯರ ಅಲಂಕಾರ ತೊಟ್ಟ ಮಕ್ಕಳಿಗೆ ಹೋಲಿಸ ಬಹುದು. ಯುಗಾದಿಯಂದು ನಾವು ಮಾವು-ಬೇವು ತರುವ ಹಾಗೆ, ಫಾಲ್ Fall( ಶಿಶಿರ?) ಋತುವು ಮುಗಿದ ಈ ಸಮಯದಲ್ಲಿ ಓಕ್ ಎಲೆಗಳನ್ನು ( Oak Leaves) ತಂದು ಸಿಂಗರಿಸುವುದರಿಂದ ಇದನ್ನು ಯುಗಾದಿ ಎನ್ನೋಣವೆ? ಐರೋಪ್ಯ ಪ್ರಾಂತ್ಯ್ದಲ್ಲಿ ನವವರ್ಶವಾಗಿ ಆಚರಿಸುತ್ತಿದ್ದರಿಂದ ಇದನ್ನು ಯೂಗಾದಿ ಎಂದರೆ ತಪ್ಪೇನಿಲ್ಲ ಬಿಡಿ.ಹಬ್ಬಗಳಿಗೂ ಋತುಗಳಿಗೂ ಇರುವ ನಂಟನ್ನು ಗಮನಿಸಿ. 'ವಸಂತ ಬಂದ ಋತುಗಳ ರಾಜ' ಎಂದು, ವಸಂತನ ಆಗಮವನ್ನು ಯುಗಾದಿಯ ಸಮಯ ಮಾವು ತೋರನ ದಿಂದ ಸ್ವಾಗತಿಸಿದರೆ , ಇತ್ತ ಚಳಿಗಾಲದಲ್ಲಿ ವೃಕ್ಷ ತರುಗಳು ಬಟ್ಟೆ ಕಳಚಿ ಹೊರಬಿದ್ದ ಓಕ್ ಎಲೆಗಲಿಂದಲೇ ಅಲಂಕಾರ.

ಅವಿವಾಹಿತ ಕನ್ಯೆಯರು ಹ್ಯಾಲೋವೀನ ರಾತ್ರಿಯಂದು ಕತ್ತಲೆ ಕೊಣೆಯಲ್ಲಿ ಕುಳಿತು ಕನ್ನಡಿಯಲ್ಲಿ ದಿಟ್ಟಿಸಿ ನೋಡಿದರೆ ತಮ್ಮ ಭಾವಿಪತಿಯ ದರ್ಶನ ವಾಗುವುದು ಎಂಬ ನೊಂಬಿಕೆ ಇದ್ದಿತು. ಇದು ಭೀಮನಮಾವಾಸ್ಯೆಯ ನಮ್ಮ ಪತಿಸಂಜೀವನಿ ವ್ರತದಂತೆ ತೋರುವುದಲ್ಲವೆ?

ಅಂತು ಪ್ರಾಚ್ಯ ಪಾಶ್ಚಿಮಾತ್ಯಗಳೆನ್ನದೆ ಹಬ್ಬಗಳ ಆಚರಣೆಗಳಲ್ಲಿ ವೈವಿಧ್ಯತೆ - ಸಾಮ್ಯತೆಗಳು ಕಾಣಬಹುದು.



ಹಾಲೊವೀನ್ ಸಂದರ್ಭದಲ್ಲಿ 'ರೂಪ'ದರ್ಶಿ ಪುಟ್ಟಕುಂಬಳಕಾಯಿ ಕು ||'ಸಾಹಿತ್ಯ' ವೇಷಧರಿಸಿರುವ ಬಗೆ

Wednesday, September 24, 2008

ಪ್ರಸ್ತುತ ಪ್ರಪಂಚದಲ್ಲಿ ಪ್ರತಾಪಭಾನು....

ವಾಮದೇವನು ಪಾರ್ವತೀದೇವಿಯನ್ನುದ್ದೇಷಿಸಿ ಹೇಳಿದಂತ ಪ್ರಾಚಿನಗಾಥೆಯೊಂದನ್ನು ಕೇಳಿ.ಪೂರ್ವಕಾಲದಲ್ಲಿ ಧರ್ಮಾತ್ಮನೂ, ಬಲಶಾಲಿಯೂ, ಸುಶೀಲನೂ ಆದ ಸತ್ಯಕೇತನೆಂಬ ರಾಜನಿದ್ದನು. ಆತನಿಗೆ ಪ್ರತಾಪಭಾನು ಮತ್ತು ಅರಿಮರ್ಧನರೆಂಬ ಸುಪುತ್ರರಿದ್ದರು. ಸದ್ಗುಣ ಸಂಪನ್ನರೂ ಧರ್ಮನಿಷ್ಠರೂ ಆದ ಅವರಿಬ್ಬರಲ್ಲಿ ಅಪೂರ್ವವಾದ ಐಕ್ಯಮತವಿದ್ದಿತು. ಅವರಲ್ಲಿ ಎಂದೆಂದಿಗೂ ಕಲಹಾದಿ ಅಹಿತಕರ ಕಲಾಪಗಳು ನಡೆಯುತ್ತಿರಲಿಲ್ಲ. ಇಂತಿರಲು ಸತ್ಯಕೇತನು ಪ್ರತಾಪಭಾನುವಿಗೆ ರಾಜ್ಯವನ್ನೆರೆದು, ವಾನಪ್ರಸ್ತಾಶ್ರಮವನ್ನು ಸ್ವೀಕರಿಸಿ ಘೋರಾರಣ್ಯಗಳನ್ನು ಸೇರಿದನು. ಇತ್ತ ಪ್ರತಾಪಭಾನುವಿಗಾದರೋ ರಾಜನೀತಿಯಲ್ಲಿ ಶುಕ್ರಾಚಾರ್ಯರ ಸರಿ ತೂಗಬಲ್ಲ ಧರ್ಮರುಚಿಯೆಂಬ ಅಮಾತ್ಯನ ಶ್ರೀರಕ್ಷೆಯಿದ್ದಿತು. ಚದುರಂಗಬಲ ಸೇನೆ ಮತ್ತು ಎಡಬಲಗಳಂತೆ, ಅರಿಮರ್ಧನ ಮತ್ತು ಧರ್ಮರುಚಿಯ ಸಹಾಯದಿಂದ ಪ್ರತಾಪಭಾನುವು ಸಪ್ತದ್ವೀಪಗಳನ್ನೂ, ನಭೂತೋ ನಭವಿಷ್ಯತಿಯೆಂಬ ಹಾಗೆ ರಾಜ್ಯಭಾರ ನಿರ್ವಹಿಸಿಕೊಂಡು ಹೋಗುತ್ತಿದ್ದನು. ಪ್ರಜೆಗಳೆಲ್ಲರು ಸತ್ಯಸಂಧರಾಗಿ ಸಂತೃಪ್ತಿಯಿಂದ ಬಾಳ್ವೆ ನಡೆಸಿಕೊಂಡು ಹೋಗುತ್ತಿದ್ದರು.

ಹೀಗಿರಲು ಒಂದಾನೊಂದು ದಿನ ಪ್ರತಾಪಭಾನುವು ಮೃಗಯಾ ನಿಮಿತ್ತ ಅರಣ್ಯಕ್ಕೆ ತೆರೆಳಿದನು. ಅಲ್ಲಿ ಶಾಸ್ತ್ರರೀತ್ಯ ವಧ್ಯಾರ್ಹ ಪ್ರಾಣಿಗಳನ್ನು ಬೇಟೆಯಾಡಿ ಬರುವಷ್ಟರಲ್ಲಿ ಅವನ ಕಣ್ಣಿಗೆ ಒಂದು ಕಾಡುಹಂದಿ ಕಾಣಿಸಿತು. ಧನುರ್ಬಾಣಗಳಿಂದ ಅದನ್ನು ಬೇಟೆಯಾಡಲು ಮುಂದಾದನು. ಅಪ್ರತಿಮ ಯೋಧನಾದ ಅವನಿಗೆ ಯಃಕಶ್ಚಿತ್ ಒಂದು ಕಾಡುಹಂದಿ ವಶವಾಗದೆ ಉಳಿಯಿತು. 'ಎಲಾ, ಕ್ಷುಲ್ಲಕ ಪ್ರಾಣಿಯೇ' ಎಂದು ಪ್ರತಾಪಭಾನುವು ಅದರ ಬೆನ್ನಟ್ಟಿ ಗೊಂಡಾರಣ್ಯದ ಒಳಹೊಕ್ಕನು. ಆ ಜಂತುವಾದರೂ ಬಿಡದೆ ನಿಗೂಢವೂ ಗಾಡಾಂಧಕಾರವೂ ಆದ ಗುಹಾಂತರದಲ್ಲಿ ಹೋಗಿ ಅವಿತು ಕುಳಿತು ಕೊಂಡಿತು. ರಾಜಭಟ್ಟರಿಂದ ದೂರನಾಗಿದ್ದ ರಾಜನಾದರೋ ದಣಿವು ಬಾಯಾರಿಕೆಗಳಿಂದ ಬಳಲಿ ಅಲ್ಲಿಯೇ ಕಾನನದ ಪುಷ್ಪತರುಗಳ ಮಧ್ಯೆ ಪ್ರಜ್ಞಾಹೀನನಾಗಿ ಕುಸಿದು ಬಿದ್ದ.

ಅದೃಷ್ಟವಶಾತ್ ಅಲ್ಲಿಯೇ ಮಾರ್ಗಮಧ್ಯದಲ್ಲಿ ಓರ್ವ ಕುಹನ ಸಂನ್ಯಾಸಿಯ ಆಶ್ರಮವಿದ್ದಿತು. ಈ ಕಪಟ ಸಂನ್ಯಾಸಿಯಾದರೋ ಪೂರ್ವಾಶ್ರಮದಲ್ಲಿ ಪ್ರತಾಪಭಾನುವಿನಿಂದಲೆ ಪರಾಜಿತನಾದ ಓರ್ವ ರಾಜನಾಗಿರುತ್ತಾನೆ. ಪ್ರತಾಪಭಾನುವಿಗೆ ಕುಹನ ಸಂನ್ಯಾಸಿಯ ಪರಿಚಯ ಸಿಗದಿದ್ದರೂ, ಅಂತಃ ಶತೃತ್ವದಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಆ ದುಷ್ಟನಿಗೆ ಪ್ರತಾಪಭಾನುವಿನ ಪೂರ್ಣಪರಿಚಯವಿದ್ದಿತು. ಅತಿವಿನಯದಿಂದ (ಧೂರ್ತಲಕ್ಷಣವೇ ಸರಿ) ಮಧುಸಮಾನ ಹಿತವಚನಗಳನ್ನು ನುಡಿದು, ವೇದಘೋಷಗಳನ್ನು ಮೊಳಗಿಸಿ ತನ್ನ ಬಾಹ್ಯಚರ್ಯೆಯಿಂದ ನಿಷ್ಕಪಟಿಯಾದ ಪ್ರತಾಪಭಾನುವನ್ನು ಸಂಪೂರ್ಣ ಮರುಳು ಮಾಡುತ್ತಾನೆ. ಈ ಕುಹನ ಸಂನ್ಯಾಸಿಯೇ ಅಪ್ರತಿಮ ಪಂಡಿತನು, ಮಹಾಮಹಿಮನು ಎಂದು ಪ್ರತಾಪಭಾನುವು ಭಾವಿಸುತ್ತಾನೆ. ಇಂತಿರಲು ಕಪಟ ಸಂನ್ಯಾಸಿಯು ತಾನು ಏಕತನುವೆಂದು ನುಡಿಯುತ್ತಾನೆ. ಪ್ರತಾಪಭಾನುವು 'ಏಕತನು ಎಂದರೇನು?' ಎಂದು ಕೇಳಲಾಗಿ, ಸಂನ್ಯಾಸಿಯು ಇಂತೆಂದು ಉತ್ತರಿಸಿದನು -- "ನಾನು ಸೃಷ್ಟಿಕಾಲದಿಂದಲೂ ಇದೇ ಶರೀರದಲ್ಲಿ ಇದ್ದೇನೆ. ಶರೀರ ತ್ಯ್ಗಾಗವನ್ನು ಮಾಡಿಯೇ ಇಲ್ಲ. ಆದರಿಂದ ನಾನು ಏಕತನುವೆಂದು ಗುರುತಿಸಲ್ಪಡುತ್ತೇನೆ" -- ಎಂಬುದಾಗಿ ವಿವರಿಸುತ್ತಾ ತಪಃ ಶಕ್ತಿಯಿಂದ ಏನನ್ನು ಬೇಕಾದರು ಸಾಧಿಸಬಹುದು ಎಂದು ಹೇಳುತ್ತಾನೆ. ಧರ್ಮದುರಂಧರನೂ ಅಪ್ರತಿಮ ರಾಜನೂ ಆದ ಪ್ರತಾಪಭಾನುವಿನ ಮನಸ್ಸಿನಲ್ಲಿ ಈ ಮಾತನ್ನು ಕೇಳುತ್ತಿದ್ದ ಹಾಗೆ ಪ್ರಲೋಭನೆ ಉಂಟಾಗುತ್ತದೆ. "ಗುರುಗಳೇ ತಪಃ ಶಕ್ತಿಯಿಂದ ನನ್ನ ಶರೀರವು ಜರಾಮರಣ ರಹಿತವಾಗುವಂತೆ ಅನುಗ್ರಹಿಸಿ. ಶತಕಲ್ಪ ಪರ್ಯಂತ ಭೂಮಂಡಲದ ಏಕಚಕ್ರಾಧಿಪತ್ಯ ದೊರೆಯುವಂತೆ ಆಶೀರ್ವದಿಸಿ" -- ಎಂಬ ಪ್ರಲೋಭನೆಯ ಮಾತನ್ನು ಆಡುತ್ತಾನೆ. ಭೂಪಾಲನನ್ನು ದಾರಿತಪ್ಪಿಸುವಲ್ಲಿ ಗೆದ್ದೆನೆಂದು ಮನದಲ್ಲೇ ತುಸು ನಕ್ಕು, ಸಂನ್ಯಾಸಿಯು -- 'ತಥಾಸ್ತು!' ಎಂದು ಅನುಗ್ರಹಿಸುತ್ತಲೇ ಒಂದು ಚೇತಾವನಿಯನ್ನು ನೀಡುತ್ತಾನೆ. ನಿನ್ನ ಯಮರಾಜನೂ ಸಹ ಜರಾಮರಣಗಳಿಂದ ಪೀಡಿಸಲಾರನು, ಆದರೆ ವಿಪ್ರೋತ್ತಮರ ಶಾಪ ತಗುಲದಂತೆ ನೋಡಿಕೋ ಎಂದು ಎಚ್ಚರಿಸುತ್ತಾನೆ. ವಿಪ್ರರ ತಪಃಶಕ್ತಿಗೆ ಅತೀವ ಬಲವಿರುತ್ತದೆ. ಆದ್ದರಿಂದ ವಿಪ್ರರಿಂದ ಶಾಪಗ್ರಸ್ತನಾಗದಿದ್ದರೆ ಶತಕಲ್ಪಗಳವರೆಗೂ ನೀನು ಭೂಮಂಡಲದ ಏಕಚಕ್ರಾಧಿಪತ್ಯ ಹೊಂದುತ್ತೀಯೆ ಎಂದು ಹೇಳಿದನು. ಇದಕ್ಕೆ ಮಹಾರಾಜನು -- "ಮುನಿವರ್ಯ, ಸದಾಕಾಲ ವಿಪ್ರೋತ್ತಮರ ಮನ ಒಲಿಸಿಕೊಳ್ಳಲು ಸೂಕ್ತ ಮಾರ್ಗೋಪಾಯವನ್ನು ನೀವೇ ಸೂಚಿಸಿ" ಎಂದು ಅಂಗಲಾಚುತ್ತಾನೆ. ಅದಕ್ಕೆ ಆ ಸಂನ್ಯಾಸಿಯು ಶತಸಹಸ್ರ ಯೋಗ್ಯ ವಿಪ್ರರಿಗೆ ಒಂದು ಸಂವತ್ಸರ ಪರ್ಯಂತ ದಿನಾಲೂ ಅನ್ನದಾನ ಮಾಡಬೇಕೆಂದು ಸೂಚಿಸುತ್ತಾನೆ. ಎಂಥಾ ರಾಜಾಧಿರಾಜನಿಗೇ ಆಗಲಿ ಕಷ್ಟಸದೃಶವಾದ ಈ ವ್ರತವನ್ನು, ಪ್ರತಾಪಭಾನುವಿಗೆ ತನ್ನ ಮಾಯಶಕ್ತಿಯ ಸಹಕಾರದಿಂದ ಮಾಡಿಸುವುದಾಗಿ ಕಪಟಿಯು ಅಶ್ವಾಸನೆಯನ್ನು ನೀಡುತ್ತಾನೆ.

ನಾಡಿಗೆ ಹಿಂದಿರುಗಿದ ಮಹಾರಾಜನು ಸುತ್ತೋಲೆಗಳನ್ನೂ, ಡಂಗೂರಗಳನ್ನು ಸೂಕ್ತ ರೀತಿಯಲ್ಲಿ ಪ್ರಚಾರಗೈದು ಶತ ಸಹಸ್ರ ವಿಪ್ರೋತ್ತಮರನ್ನು ಒಂದೆಡೆ ಅನ್ನದಾನಕ್ಕಾಗಿ ಸೇರಿಸುತ್ತಾನೆ. ಕಾಡುಹಂದಿಯ ರೂಪ ತಾಳಿ ರಾಜನನ್ನು ಆ ದಿನ ದಾರಿತಪ್ಪಿಸಿದ ಕಪಟ ಸಂನ್ಯಾಸಿಯ ಮಿತ್ರನಾದ ಕಾಲಕೇಟ ರಾಕ್ಷಸನು ತನ್ನ ಮಾಯೆಯಿಂದ ನೆರೆದ ವಿಪ್ರೋತ್ತಮರಿಗೆಲ್ಲ ಮೃಷ್ಠಾನ್ನ ಭೋಜನ ತಯಾರು ಮಾಡುತ್ತಾನೆ. ಆದರೆ ದುಷ್ಟನಾದ ಅವನು ಕಪಟ ಸಂನ್ಯಾಸಿಯ ಒಡಗೂಡಿ ಭೋಜ್ಯಗಳಲ್ಲಿ ನರಮಾಂಸವನ್ನು ವಿಪ್ರರಿಗೆ ಉಣಬಡಿಸಿ ಘೋರಪಾಪವೆಸುಗುತ್ತಾರೆ. ದ್ವಿಜರು ಒಂದು ತುತ್ತು ತಿನ್ನುವಷ್ಟರಲ್ಲಿ ಆಕಾಶದಲ್ಲಿ ಒಂದು ಅಶರೀರವಾಣಿಯು ಖಾದ್ಯಗಳು ಅಪವಿತ್ರವಾಗಿರುವುದರ ಬಗ್ಗೆ ಘೋಷಿಸುತ್ತದೆ. ಕಪಟದಿಂದ ನರಮಾಂಸಭಕ್ಷಣೆ ಮಾಡಿಸಿದುದಕೆ ಕುಪಿತಗೊಂಡ ವಿಪ್ರೋತ್ತಮರು ಪ್ರತಾಪಭಾನುವನ್ನು ಬಹಳವಾಗಿ ಶಪಿಸುತ್ತಾರೆ. ಇನ್ನು ಒಂದು ಸಂವತ್ಸರದಲ್ಲಿ ನಿನ್ನ ಪರಿವಾರ ಸಮೇತ ಧ್ವಂಸವಾಗಿ ನಿನ್ನ ತರ್ಪಣಕ್ರಿಯೆಗೂ ಉತ್ತರಾಧಿಕಾರಿಗಳು ಇರದಂತೆ ಆಗಲಿ ಎಂದು ಘೋರವಾಗಿ ಶಪಿಸುತ್ತಾರೆ. ಆಕಾಶವಾಣಿಯು ಈ ವೃತ್ತಾಂತದಲ್ಲಿ ಮಹಾರಾಜನ ಕೈವಾಡವಿಲ್ಲವೆಂದು ಹೇಳಿದರೂ, ಒಮ್ಮೆ ಶಾಪಗ್ರಸ್ಥನಾದರೆಂದರೆ ಕಾಲವಿಧಿನಿಯಮದಂತೆ ಅನುಭವಿಸಿಯೇ ತೀರಬೇಕು ಎಂದು ಹೇಳಿ ವಿಪ್ರರೆಲ್ಲರು ಸಭೆಯನ್ನು ತ್ಯಜಿಸಿ ಹೊರನಡೆಯುತ್ತಾರೆ. ಅದೇ ಶಾಪದಂತೆ ಪ್ರಲೋಭನೆ ಮತ್ತು ದುರ್ವ್ಯಾಪ್ತಿಗೆ ಒಳಗಾದ ಪ್ರತಾಪಭಾನುವು ವರ್ಷಾಂತ್ಯದಲ್ಲಿ ಕಾಲಕೇಟ ರಾಕ್ಷಸ ಮತ್ತು ವೇಷ ಕಳಚಿದ ಕಪಟ ಸಂನ್ಯಾಸಿಯ ಉಭಯ ಸೈನ್ಯಗಳಿಂದ ಹತನಾಗುತ್ತಾನೆ. ಧರ್ಮನಿರತನೂ ಸದ್ಗುಣಸಂಪನ್ನನೂ ಆದರೂ ಮಹಾರಾಜನು ವ್ಯಾಪ್ತಿಗಿಂತ ಮೇಲೆ ಹೋಗಲು ಇಚ್ಚ್ಚಿಸಿದ. ಸಾಕಷ್ಟು ಪ್ರಭಾವಿಯಾಗಿದ್ದು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದರೂ ಪ್ರಕೃತಿಸಹಜವಾಗಿಲ್ಲದಿದ್ದ ಸಂಪತ್ತು - ಸ್ಥಿತಿ - ಬೆಳವಣಿಗೆಯನ್ನು ಅಪೇಕ್ಷಿಸಿ ಅಸ್ತಂಗತನಾದ. ಕಾಲಂತರದಲ್ಲಿ ಇದೇ ಪ್ರತಾಪಭಾನುವು ತ್ರೇತಾಯುಗದಲ್ಲಿ ರಾವಣನಾಗಿ, ಅರಿಮರ್ಧನನು ಕುಂಭಕರ್ಣನಾಗಿ ಮತ್ತು ಮಂತ್ರಿ ಧರ್ಮರುಚಿಯು ವಿಭೀಷಣನಾಗಿ ಜನಿಸಿದರು ಎಂಬಲ್ಲಿಗೆ ಪಾರ್ವತಿ ಪರಮೇಶ್ವರರ ಸಂವಾದದಲ್ಲಿಿ ದುರ್ವ್ಯಾಪ್ತಿಯ ಕೆಡುಕುಗಳನ್ನು ಸಾರಿಹೇಳುವ ಪ್ರತಾಪಭಾನು-ಅರಿಮರ್ಧನರ ಕಥೆಯು ಸಮಾಪ್ತವಾಗಲಿಲ್ಲ.

ಆನಾದಿಕಾಲದಿಂದಲೂ ಇಂತಹ ಕಥೆಗಳು ನಡೆದಿವೆ, ಇಂದಿಗೂ ನಡೆಯುತ್ತಲೇ ಇವೆ. ಕೃತಯುಗದ ಪ್ರತಾಪಭಾನು-ಅರಿಮರ್ಧನರ ಕಥೆ ಹಾಗಿರಲಿ, ಪ್ರಸ್ತುತ ವಾರ್ತೆಗಳಲ್ಲಿ ಕೇಳಿಬರುತ್ತಿರುವ ಲೀಮನ್ ಭ್ರಾತೃಗಳ ಕಥೆ ಕೇಳಿ. ಪ್ರಕೃತಿ ಸಹಜವಲ್ಲದ ವಾರ್ಷಿಕ ಆದಾಯ-ಅಭಿವೃದ್ಧಿ ಪ್ರತಿವರ್ಷವೂ ಆಗಲೇಬೇಕು (year-on-year growth). ಅದು ಯಾವ ಪಣತೆತ್ತಾದರೂ ಸರಿ ಅಭಿವೃದ್ಧಿಯ ಮೆಟ್ಟಲು ಏರಲೇಬೇಕು ಎಂಬ ಧೋರಣೆ. ಇಡೀ ಉದ್ಯಮ ಐದು ಪ್ರತಿಶತ ಬೆಳೆದರೆ ನನ್ನ ಕಂಪನಿ ಇಪ್ಪತ್ತೈದರಷ್ಟು ಬೆಳೆಯ ಬೇಕೆಂಬ ದುರುತ್ಸಾಹ. ಎಲ್ಲರಿಗಿಂತ ನಾನು ಮುಂದು ಇರಬೇಕೆಂಬ ಹಂಬಲ ತಪ್ಪಲ್ಲ. ಅದೇ ಪ್ರಗತಿಗೆ ಪ್ರೇರಕ -- ಆದರೆ ಸಹಜವೆನಿಸದಷ್ಟು ಬೆಳವಣಿಗೆ ಕಾಣ ಬೇಕೆಂಬುದು ದುರ್ವ್ಯಾಪ್ತಿಯ ಪರಮಾವಧಿ. ಜಗತ್ತಿನ ಮೇಧಾವಿಗಳೆಲ್ಲ (ಇನ್ವೆಸ್ಟ್ಮೆಂಟ್ ಬ್ಯಾಂಕರ್ ಗಳು) ಒಂದೆಡೆ ಸೇರಿ ಬೆಳೆಸಿದ ಕಂಪನಿ. ಸೋಲು ಕಂಡಿಲ್ಲದ ಸರದಾರರು ಗೆಲ್ಲಲ್ಲು ಏನು ಬೇಕಾದರೂ ರಿಸ್ಕ್ (risk) ತೆಗೆದು ಕೊಳ್ಳಲು ಶಕ್ತರು. ಹೀಗೆ ನಾಗಲೋಟದ ಬೆಳವಣಿಗೆಗೆ ಉರುವಲು ನೀಡಲು ಅದೆಷ್ಟು ಅಸಹಜ ನಡೆಗಳನ್ನು ಬೇಕಾದರೂ ಹಾಕುವರು. ಇಂದಿನ ಲೀಮನ್ ಬ್ರದರ್ಸ್ ಮುಂತಾದ ಕಂಪನಿಗಳಾಗಲಿ, ಅಂದಿನ ಪ್ರತಾಪಭಾನುವಾಗಲಿ ಮೂಲತಃ ಒಳ್ಳೆಯವರೇ, ಶಕ್ತಿ ಶಾಲಿಗಳೇ, ಮೇಧಾವಿಗಳೇ -- ಆದರೆ ವ್ಯಾಪ್ತಿಯನ್ನು ಮೀರಿ ಅಪೇಕ್ಷಿಸಿದ್ದರಿಂದ ಅವನತಿ ಕಂಡವರು!

****

Related News Item:

The High Cost of Growth:

The collapse of these financial giants has been stunning in both its speed and severity.These fallen companies were overlevered, overconfident, and too slow to either realize or admit that they were in serious jeopardy. But these companies all shared one additional trait that foreshadowed their downfall. They pursued a strategy of growth at any cost -- and it ultimately cost them dearly.Year after year, these companies targeted double-digit growth, despite much slower growth in their core markets.What wasn't being asked strenuously enough was what risks the companies were taking to maintain this supranormal growth rate. This problem isn't unique to financial companies; they're just the most recent high-profile examples.Unless a company has a sustainable competitive advantage, growth rates that outpace the rest of its industry can be a signal of accounting shenanigans or aggressive business practices.

***

Sunday, June 22, 2008

ಸಂಘಟನೆ ಮತ್ತು ವ್ಯವಸ್ಥೆ

ಸಂಘಟನೆ ಮತ್ತು ವ್ಯವಸ್ಥೆ ..............

Thursday, May 29, 2008

ಮುಕ್ತಿ


ವಿರಕ್ತಿಯಲ್ಲಿಲ್ಲ ಎನಗೆ ವಿಮುಕ್ತಿ ಭಾವನ.
ನನ್ನನ್ನಪ್ಪಿದ
ಸಹಸ್ರ ಮಧುರ ಬಂಧಗಳಲಿ
ನಾ ಕಾಣುತಿರಲು
ಬಿಡುಗಡೆಯ ಆಲಿಂಗನ.

***

ರಬೀಂದ್ರನಾಥರ ಈ ಕೆಳಗಿನ ಉಕ್ತಿಯ ಭಾವಾನುವಾದ:

Deliverance is not for me in renunciation.I feel the embrace of freedom in a thousand bonds of delight.

- Rabindranath Tagore, Geetanjali 73.

Tuesday, May 27, 2008

ಬಯಲಾಟದಿಂದ ಬಾಲಿವುಡ್ ವರೆಗೆ

ಚೈತ್ರ ಶುದ್ಧ ಹುಣ್ಣಿಮೆಯಂದು ಹೊಸಕೋಟೆಯಲ್ಲಿ ಅದ್ಧೂರಿ ಕರಗ ಮಹೋತ್ಸವ ನಡೆಯಿತು. ಬೆಳಗಿನ ಸಮಯ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ನೆರವೇರಿತು. ಸಾಂಪ್ರದಾಯಿಕವಾಗಿ ತೇರು ಎಳೆದು, ಸುತ್ತ ಹತ್ತು ಹಳ್ಳಿಗಳಿಂದ ಬಂದವರೆಲ್ಲ ಸೇರಿ ಭಕ್ತಿ ಉತ್ಸಾಹ ಮೆರೆದರು. ಮದ್ಯ ರಾತ್ರಿ ಕಳೆದ ಮೇಲೆ ಮುಖ್ಯ ಬೀದಿಗಳಲ್ಲಿ ಕರಗ ಬಂದಿದ್ದಾಗಲಿ, ಕರಗದ ಹಿಂದೆ ನಡೆದ ವೀರಗಾರರ ಪೌರುಷವನ್ನಾಗಲಿ, ಮುಂಜಾವಿನಲ್ಲಿ ತಂಡೋಪ ತಂಡವಾಗಿ ಮೆರವಣಿಗೆ ಬಂದ ಅಲಂಕೃತ ಹೂವಿನ ಪಲ್ಲಕ್ಕಿಗಳ ಬಗ್ಗೆ ಯಾಗಲಿ ನಾನು ಹೇಳ ಹೊರಟಿಲ್ಲ. ಇವೆಲ್ಲ ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕರಗವಾದ ಮರುದಿನ ಪ್ರತಿ ವರ್ಷವೂ ಸಚಿತ್ರವಾಗಿ ಪ್ರಕಟವಾಗುತ್ತದೆ. ಆದರೆ ಈ ಬಾರಿ ನಾನು ಕಂಡ (ನನಗೆ) ಸೋಗಿಗವೆನಿದ ದೃಷ್ಯವನ್ನು ಹಂಚಿಕೊಳ್ಳುತ್ತೇನೆ. ಕರಗ ಮಹೋತ್ಸವವೆಂದರೆ ತಾಲ್ಲೂಕಿನಲ್ಲಿನ ಮುನ್ನೂರಕ್ಕು ಹೆಚ್ಚು ಹಳ್ಳಿಗಳಲ್ಲಿ ಸಂಭ್ರಮವಂತೆ. ಒಂದು ತಾಲ್ಲೂಕಿನಲ್ಲಿ ಸರಿ ಸುಮಾರು ಮುನ್ನೂರು ಹಳ್ಳಿಗಳ್ಳಿರುತ್ತವೆ -- ಎಂಬ ವಿಷಯವೂ ನನ್ನ ಊಹೆಗೆ ಮೀರಿದ್ದರಿಂದ ಅಲ್ಲಿ ನೆರೆದಿದ್ದ ಜನರ ಸಂಖ್ಯೆ ನನ್ನನ್ನ ಚಕಿತನನ್ನಗಿಸಿತ್ತು. ಜಾತ್ರೆಯಲ್ಲಿ ಎದ್ದಿದ್ದ ಸಾಲು ಮಳಿಗೆಗಳ ಮೇಲೆ ಕಣ್ಣು ಹಾಯಿಸಿದೆ. ಬೆಂಡು - ಬತ್ತಾಸು ಅಂಗಡಿಗಳು , ಹೆಂಗೆಳೆಯರಿಗೆ ಓಲೆ - ಝುಮುಕಿ ಸ್ಟಾಲ್ ಗಳು , ಗೃಹೋಪಯೋಗಿ ಬಳಕೆಯೆ ಪಾತ್ರೆ - ಚಂಬುಗಳ ಅಂಗಡಿಗಳು ಇತ್ಯಾದಿಗಳಿ ಸಾಲು ಸಾಲಾಗಿ ಇದ್ದವು. ಅಂಗಡಿ ಸಾಲುಗಳಲ್ಲಿ ಹೊಸತಾದ ಬಾಲಿವುಡ್ ಸಿನೇಮಾಗಳ ಡಿ.ವೀ.ಡಿ ಗಳ ಮಳಿಗೆಗಳು ನನ್ನ ಕಣ್ಣಿಗೆ ಬಿದ್ದವು. ಹಳ್ಳಿ ಜಾತ್ರೆಯಲ್ಲಿ ಯಾರು ಈ ಡಿ.ವಿ.ಡಿ ಗಳನ್ನು ಕೊಳ್ಳುವರು ಎಂದು ಕುತೂಹಲದಿಂದ ನಿಂದಿದ್ದ ನನ್ನ ಮುಂದೆ, ಗ್ರಾಮ್ಯನಂತೆ ಕಾಣುವ ಒಬ್ಬ ಮಧ್ಯ ವಯಸ್ಕ ಬಂದು ಖರೀದಿಸಿ ಹೋದ. ಅಂದು ರಾತ್ರಿ ಹತ್ತು ಘಂಟೆ ಕಳೆದ ಮೇಲೆ ಅಲ್ಲೆ ಬಯಲುನಾಟಕ ನೋಡಿದೆ. ಕೆಲ ಮೈಲಿಗಳ ದೂರದಲ್ಲಿ ಕಿವಿ ಕಿತ್ತು ಹೋಗುವಷ್ಟು ಜೋರಾಗಿ ಆರ್ಕೇಸ್ಟ್ರಾ ಸಾಗಿತ್ತು. ಈ ದಿನ ನಮ್ಮ ಮುಂದೆ ಇರುವ ಮನೋರಂಜನೆಯ ಮಧ್ಯಾಮಗಳು, ಚಾಯಿಸಸ್ ಬಗ್ಗೆ ಯೋಚನಾ ಲಹರಿ ಹರಿಯಿತು. ಹತ್ತು ಕಳೆದ ಮೇಲೆ ಬಯಲಾಟ ನೋಡುವವನೊಬ್ಬ ಬಾಲಿವುಡ್ ನ ಧೂಮ್ - ೨ ಡಿ.ವಿ.ಡಿ ಕೊಂಡ ನೆಂದರೆ, ಅವನ ಮನೆಯಲ್ಲಿ ಕನಿಷ್ಟ ಪಕ್ಷ ಒಂದು ಡಿ.ವಿ.ಡಿ. ಪ್ಲೈಯರ್ ಇರಲೇ ಬೇಕು. ಹಲವಾರು ಸೀ.ಡಿ ಗಳನ್ನು ಶೋಧಿಸಿ ಇದೇ ಸೀ.ಡಿ. ಖರೀದಿಸಿದನೆಂದರೆ ಅವನ ಬಾಲಿವುಡ್ ಬಗೆಗಿನ ಅವೇರ್ನೆಸ್ಸ್ ಬಗ್ಗೆ ನಾನು ಹೇಳಲೇ ಬೇಕಾಗಿಲ್ಲ. ಗ್ರಾಹಕ ವಿಙ್ನಾನ (Consumer Pshycology) ಬಲ್ಲವರು ಈ ಬಯಲಾಟದಿಂದ ಬಾಲಿವುಡ ವರೆಗಿನ ಪಯಣವನ್ನು ಅಧ್ಯಯನ ಮಾಡಲೇ ಬೇಕು ಅಲ್ಲವೇ? ಅವರೊಂದಿಗೆ ಬಹುಷಃ Music Piracy Industry ಬಗ್ಗೆ ಕಾಳಜಿ ಇರುವವರು ಸಹಾ ಅಧ್ಯಯನದಲ್ಲಿ ಶಾಮೀಲಾಗಬಹುದೇನೊ!

Saturday, April 19, 2008

ಚಕಮಕಿ

ನೀ ಕೇಳಿದ್ದು ಪ್ರಶ್ನೆಗಳೆಂದು ತಿಳಿಯಲೇ ಇಲ್ಲವಯ್ಯ ನನ್ನೋಡೆಯ,
ಈಗ ಪರೀಕ್ಷೆಯು ಮುಗಿಯಿತೆಂದು ಹೇಳುವುದು ನಿನಗೆ ತರವೇ?
ಪರಕಿಸುವ ತೇದಿ ತಿಳಿದರೂ ನಾ
ತೇರ್ಗಡೆಯಾಗುವುದು ಅಷ್ಟಕ್ಕಷ್ಟೆ!
ಹೀಗಿರಲು ಹಟ್ಠಾತ್ತನೆ ಹೀಗೆ,
ತಿಳಿಯದೆಲೆ ನಾನು ತೂಕಡಿಸುತಿರುವಾಗ
ನನ್ನ ಬಲಾಬಲಗಳನು ತೂಗಿ,
ಮುಂದಿನ ತರಗತಿಗೆ ನನ್ನ ತಳ್ಳಿಯೂ ಹಾಕಿರಲು,
ಉತ್ತೀರ್ಣನಾದರೂ ನಾ ಹೇಗಾದರೂ ತಡೆದು ಕೊಳ್ಳಲಿ
ಈ ಚಕಮಕಿ.
ಇನ್ನು ಮುಂದೆ ಸಜ್ಜಾಗುವ ಗೋಜಿಗೆ ಹೋಗುವುದೇ ಇಲ್ಲ ಬಿಡು.
ಎಷ್ಟೆ ಆದರೂ ಇದ್ದೆ ಇದೆಯಲ್ಲ,
’ ಆದದ್ದೆಲ್ಲ ಒಳ್ಳೆಯದಕ್ಕೆ!’
- ಅನ್ನುವ ದಾಸರ ಸಮಜಾಯಿಷಿ, ಕುಂಟು
ನೆಪ, ಸಾಂತ್ವನ ಇತ್ಯಾದಿ ಇತ್ಯಾದಿ.
ಮತ್ತೆ,
ಇನ್ನೆಂದು ಹೂಡಿರುವೆ ತುರ್ತು ತಬ್ಬಿದ
ನಿನ್ನಯ ಧಿಡೀರ್ ಪರೀಕ್ಷೆ.......?


Friday, April 18, 2008

ವಸುಂಧರೆಗೆ ಚಂದ್ರಾನುಲೋಮ



ಧರಣಿ ದೇವಿ ಕುದಿಯುತ್ತಿದ್ದಾಳೆ. ಜಾಗತೀಕ ತಾಪಮಾನ ನಾಗಾಲೋಟದಿಂದ ಬೆಳೆಯುತ್ತಿದ್ದಂತೆಲ್ಲಾ ಪರಿಸರಪರ ಕಾಳಜಿಯುಳ್ಳ ನೇತಾರರು ಉಶ್ಣಾಂಶವನ್ನು ಹಿಡಿತದಲ್ಲಿ ಇಟ್ಟುಕೊಳ್ಳ ಬೇಕೆಂದು ಬೊಬ್ಬೆ ಹೊಡೆಯುತ್ತಲೇ ಇದ್ದಾರೆ.ಯಾರು ಎಷ್ಟು ಕೂಗಾಡಿದರೂ, ವಿಶಾನಲಗಳನ್ನು ಉಗುಳಿ ಬುಗಿಲಿಕ್ಕುವ ಹವಾನಿಯಂತ್ರಕಗಳು ಮನೆಗಳಲ್ಲಿ, ಕಚೇರಿಗಳ್ಲ್ಲಿ ನಿಂತಿಲ್ಲ. ಕಾರ್ಖಾನೆಗಳು ಎಂದಿಗಿಂತಲೂ ಹೆಚ್ಚು ಮಾಲಿನ್ಯದ ಮಹಾತಾಂಡವ ಮೂಡಿಸಿ, ಆರ್ಭಟದ ಅಟ್ಟಹಾಸ ಮೆರೆದಿವೆ. ಕಟುವೆನಿಸಿದರೂ ನಿಜವೇ ಆಗಿರುವ ಒಂದು ವಿಶಯ ನಿಮ್ಮ ಮುಂದಿಡುತ್ತಿದ್ದೇನೆ.ವಿನಾಶದ ಜಗತ್ಪ್ರಳಯದತ್ತ ಕರೆದೋಯ್ಯುತಿರುವ ಈ ಉಷ್ಣಾಂಶದ ಏರಿಕೆಯನು (Global Warming) ಸಕಾಲದಲ್ಲಿ -- ಅಂದರೆ ಉತ್ತರಧೃವದ ಹಿಮಪರ್ವತಗಳು ಕರಗಿ ಭೂದೇವಿಯ ಜಲಪ್ರಳಯವಾಗುವಷ್ಟರಲ್ಲಿ ಅಂತರಾಷ್ರೀಯಸಮುದಾಯಕ್ಕೆನಿಗ್ರ್ಹಿಹಿಸಲು ಸಾದ್ಯವಾಗುವುದಿಲ್ಲ. ಆರ್ಕ್ಟಿಕ್ ಮಹಾಸಾಗರ ( Arctic Ocean) ಕಳೆದ ಸಾಲು ದಾಖಲೆಯ ಕರಗುವಿಕೆ ಅನುಭವಿಸಿದೆ. ಹಿಂದಿನ ಸಂಶೋದಕರು ನೀಡಿದ ಅಂಕಿ ಅಂಶಗಳನ್ನು ಅಲ್ಲಗೊಳಿಸುವಷ್ಟು ವೇಗದಲ್ಲಿ ,ಅಂದರೆ -- ಸರಿ ಸುಮಾರು ೨೦೧೪ ಸಂವತ್ಸರದೊಳಗೆ ಉತ್ತರಧ್ರುವವು ಮಂಜು ರಹಿತವಾಗಬಹುದಂತೆ. ಊಹೆಗಿಂತ ದಶಕಗಳ ಮೊದಲೇ ಉತ್ತರಧ್ರುವ ತುಹಿನ ರಹಿತವಾಗುವ ಕರಾಳ ದೃಷ್ಯಗಳು ನಮ್ಮ ಮೂಗಿನ ಮುಂದೆಯೇ ಇದ್ದರೂ ಲೋಕವೆಲ್ಲವೂ ಲೋಕಾಭಿರಾಮವಾಗಿ ಕಾಲ್ಚಾಚಿ ಮೋಜಿನಿಂದಿದೆ.

ಸರಿ, ಇಂತಿರಲು ಜಗಜ್ಜನತೆಯು ಯವ-ತಿಲಗಳನ್ನು ಹಿಡಿದು ಭೂದೇವಿಗೆ ತರ್ಪಣವೀಯ್ಯಲು ಸಿದ್ಧರಾಗ ಬೇಕೆ? ಇಲ್ಲವೆನ್ನುತ್ತಾರೆ ಕೆಲ ಸಂಶೋದಕರು. ಭೂಮಿಯ ಮೈಜ್ವರವನ್ನು ತಡೆಯಲಾಗದ್ದಿದ್ದರೇನು, ಭೂಮಿಗೆ ಶೀತ ಹಿಡಿಸ ಹೊರಟ್ಟಿದ್ದಾರೆ ಈ ಮಹನೀಯರು. ಇವರ ವಾದ ತೀರ ಸಿಂಪಲ್ . ಏರುವ ದಗೆಯನ್ನು ತಡೆಯಾಲಾಗಲಿಲ್ಲ. ಹಾಗಾದರೆ ಭೂಗರ್ಭವನ್ನೇ ತಂಪು ಮಾಡಿಬಿಡೋಣ. ಭೂಮಿಗೆ ಶೀತ ಹಿಡಿಸುವುದು ಹೇಗೆ? ಉಪಾಯವಿದೆ. ಕಲವೊಮ್ಮೆ ಹಸ್ಯಾಸ್ಪದವೆಂದೂ, ಐಂದ್ರಜಾಲೀಯವೆಂದೂ ಅನಿಸಿದರೂ ವಾಸ್ತವವಾಗಿ ಮಾಡಿಯೂ ತೀರ ಬಹುದಾಗಿದೆ. ೨೦೦೬ ಸಾಲಿನ ನೋಬೆಲ್ ಸಂಶೋದಕ ಪಾಲ್ ಕೃಟ್ ಜೆನ್ (Paul Crutzen) ಅವರ ಲೇಖನಗಳಲ್ಲಿ ಭೂಗೋಳ ವಿಙ್ನಾನದ (Geo Engineering) ಪ್ರಾಮುಖ್ಯತೆಯನ್ನು ಪ್ರಚಲಿತ ಸಂಧರ್ಭದಲ್ಲಿ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಮುದ್ರದ ತಳಕ್ಕೆ ಉಕ್ಕು - ಸುತುವಿನ ಲೇಪ ಸಿಂಪಡಿಸಿ ಇಂಗಾಲವನ್ನು ಹೀರುವಂತೆ ಮಾಡುವುದರಿಂದ ಹಿಡಿದು, ಅಂತರಿಕ್ಷದಲ್ಲಿ ಗಂಧಕದ ರಸಾನಲಗಳನ್ನು ಪ್ರೋಕ್ಷಿಸಿ, ರಾಸಾಯನಿಕ ವ್ಯೂಹ ನಿರ್ಮಿಸಿ ,ಸೂರ್ಯ ಕಿರಣಗಳು ಪ್ರಖರವಾಗಿ ಭುದೇವಿಯನ್ನು ಸೋಕದಂತೆ ನೋಡಿಕೊಳ್ಳುವುದರ ವರೆಗೂ ಭೂಮಿಗೆ ಸೀತ ಹಿಡಿಸಬಹುದು. ಮನೆಗಳ ಮೇಲ್ಚಾವಣಿಗೆ ಬಿಳಿ ಬಣ್ಣ ಪೈಂಟ್ ಮಾಡಿಸಿದರೂ ಭೂಮಿ ತಂಪಾಗುತ್ತದೆ. ಮತ್ತೊಂದು ಸೈನ್ಸ್ ಫಿಕ್ಷನ್ ಅನಿಸುವ ವಿಧಾನದಲ್ಲಿ, ನಕ್ಷತ್ರ ಮಂಡಲದಲ್ಲಿ (Orbitals) ಕನ್ನಡಿಗಳನ್ನು ವಿಶೇಷ ಕೋನಗಳಲ್ಲಿ ಅಳವಡಿಸಿದರೆ, ಕಿರಣಗಳು ಭೂಮಿಯ ಒಳಗೆ ಪವೇಶಿಸದೆ ತಣ್ಣಗಿಡಬಹುದಂತೆ. ಅಂತೂ ವರಾಹಾವತಾರದಲ್ಲಿ ಮಹಾವಿಷ್ಣುವು ಭೂದೇವಿಯನ್ನು ತನ್ನ ಕೋರೆದಾಡೆಗಳಿಂದ ಮೇಲ್ಹಿಡಿದು ರಕ್ಷಿಸಿದ ಹಾಗೆ ಅವತರಿಸಿ ಈ ದಿನವೂ ವಸುಂಧರೆಗೆ ಚಂದ್ರಾನುಲೋಮ ಮಾಡಿಸಬೇಕಿದೆ.



Picture Courtesy : http://www.lib.uchicago.edu/e/su/southasia/varaha.jpg

Related Article:
TIME Magazine; March 24, 2008; 10 Ideas that are changing the world.
Geo Engineering - Messing with nature caused Global Warming.Messing with it more might fix it.

Thursday, March 13, 2008

ಮುಯ್ಯಿಗೆ ಮುಯ್ಯಿ

ಶನಿವಾರ ಬೆಳಗ್ಗೆ ಸುಮಾರು ಹತ್ತು ಘಂಟೆ ಸಮಯ ಇದ್ದಿರ ಬಹುದು. ನನ್ನ ಪುಟಾಣಿ ಕಿಟ್ಟ ಓಡ್ಕೊಂಡು ಬಂದು, ನನ್ನ ಕೈ ಹಿಡಿದು, ಹೊರಗೆ ಎಳ್ಕೊಂಡು ಹೋದ. ಪಾಂಡವರ ಮನೇಲಿ ಘಟೋದ್ಗಜ ಹುಟ್ಟ್ಕೊಂಡ ಹಾಗೆ ಹುಟ್ಟಿದಾನೆ ನಮ್ಮ ಮನೇಲಿ ಇವನು. ಕೈಗೆ ಸಿಕ್ಕಿದನ್ನ ಕ್ಷಣಾರ್ಧದಲ್ಲಿ ಧ್ವಂಸ ಮಾಡೋ ಕಿರಾತಕ ನನ್ನ ಕಿಟ್ಟ. ರಜಾ ದಿನ ಆಟಾಡ್ಕೊಳೊ ಅಂತ ಹೊರಗೆ ಬಿಟ್ರೆ, ಹೋಗಿ ಆ ಪಕ್ಕದ್ಮನೆ ಖನ್ನಾ ಮನೆ ಬಾಗಿಲನ್ನ ಬ್ಲೇಡ್ ತೊಗೊಂಡು ಗೀಚಿ ಹಾಕಿದಾನೆ ಈ ಮುಂಡೆಮಗ. ಏನ್ ಅಂತಾ ತಲೆ ಹೋಗೊ ಅಷ್ಟು ಘನಂಧಾರೀ ಡ್ಯಾಮೇಜ್ ಆಗದೆ ಇದ್ರೂನೂವೇ , ಬಾಗಿಲ ಮೇಲೆ ವಿಚಿತ್ರ ವಿಚಿತ್ರವಾಗಿ ಕೆತ್ತ್ ಹಾಕಿದಾನೆ . ಲಕ್ಷಣವಾಗಿ ಅಲ್ಲಾದ್ರೂ 'ಅ ಆ ಇ ಈ..' ಗೀಚಿದಾನೇನೋ ಅಂದ್ರೆ, ಒಳ್ಳೆ ಆದಿಮಾನವ ಗುಹಾಂತರ ದೇವಾಲಯದಲ್ಲಿ, ಬೇಕಾಬಿಟ್ಟಿ ರೇಖಾಚಿತ್ರ ಗೀಚಿದ ಥರ ಗೀಚಿದಾನೆ. ಯಾರಿಗೂ ಕಾಣ್ಸೋ ಅಷ್ಟು - ಗೊತ್ತಾಗೋ ಅಷ್ಟು ಆಳವಾಗಿ ಕೆತ್ತಿರ್ಲಿಲ್ಲ ಬಿಡಿ. ಸುತ್ತಾ ಮುತ್ತಾ ಬೇರೆ ಯಾರೂ ಇರ್ಲಿಲ್ಲ ನೋಡಿ, ಚುಪ್ ಚಾಪ್ ಅಲ್ಲಿಂದ ಮಗನ ಜೊತೆ ಕಳ್ಚ್ಕೊಲೋಣ ಅಂತ ಅನ್ಕೊಂಡೆ ಮೊದಲು. ಅಲ್ಲ ಮಾತಿಗೆ ಹೇಳ್ತೀನಿ, ಯಾರಿಗಿರಲ್ಲ ಇಂತ ವೀಕ್ ಮೊಮೆಂಟು ಹೇಳಿ ನೋಡೋಣ; ನಾನು ಈ ವಿಷಯವನ್ನು ನಿಸ್ಸಂಕೋಚವಾಗಿ ಹೇಳ್ಕೋತಾ ಇದೀನಿ ಅಷ್ಟೆ, ಎಲ್ಲರಿಗೂ ಪರಾರಿ ಆಗೋಣಾ ಅಂತ್ಲೇ ಅನ್ಸೋದು ಮೊದಲು. ಆದರೆ ಪಕ್ಕದಮನೆಗೆ ಬಾಗಿಲಿಗೆ ನನ್ನ ಜೇಬಿನಿಂದ ಖರ್ಚು ವೆಚ್ಚ ಆಗಿ, ಹಾಕಿಸ ಬೇಕಾದ ಬಣ್ಣ ಅಷ್ಟೇನೂ ದುಬಾರಿ ಆಗಲ್ಲ ಅಂತ ಊಹೆ ಮಾಡಿದ ಮೇಲೆ, ಸತ್ಯಕ್ಕೂ ಒಂದು 'ಸ್ಮಾಲ್ ಚಾನ್ಚೆ' ಕೊಡೋಣ ಅಂತ ಧೈರ್ಯಮಾಡಿ ಬಾಗಿಲು ತಟ್ಟೇ ಬಿಟ್ಟೆ. ಒಳಗಡೆ ಇಂದ ಸುಮಾರು ಆರೂವರೆ ಅಡಿ ದೇಹ ಬಾಗಿಲು ತೆಗೀತು. ಭೀಮಕಾಯನಾದ್ರೂ ನಗ್ನಗ್ತಾ ಬರಮಾಡಿಕೊಂಡ್ರು ಖನ್ನ ಅಂಕಲ್ಲು . ನಮ್ಮ ವಠಾರಕ್ಕೆ ಹೊಸದಾಗಿ ಬಂದಿದ್ದ ಅವರು, ತಮ್ಮನ್ನ ತಾವೇ ಪರಿಚಯ ಮಾಡ್ಕೊಂಡ್ರು. ನಾನು ಮುಜ್ಮುಜುಗರವಾಗಿ: 'ನೋಡಿ ಸ್ವಾಮಿ, ನಮ್ಮ ತುಂಟ ಕಿಟ್ಟ, ಹೀಗೆ ನಿಮ್ಮ ಮನೆ ಬಾಗಿಲಿಗೆ ಗಾಯಮಾಡಿದಾನೆ' ಅಂತ ಹೇಳ್ತಾ, ಹ್ಯಾಪ್ಮುಖ ಹಾಕೊಂಡು, ರೇಖಾಚಿತ್ರಕ್ಕೆ ಬೆರಳು ಮಾಡಿ ತೋರಿಸಿದೆ. ಅದಕ್ಕೆ ಅವರು "ಎಲ್ಲಿ ಎಲ್ಲಿ, ಯಾವುದರ ಬಗ್ಗೆ ನೀವು ಹೇಳ್ಥಾ ಇರೋದು ತೋರ್ಸಿ?" ಅಂತ ಕಣ್ಣ್ಣಿಗೆ ಕಾಣ್ಸೋದೆ ಇಲ್ವೇನೋ ಅನ್ನೋಷ್ತು; ಗೀಚಿರೋದು ಲೆಕ್ಕವೇ ಇಲ್ಲವೇನೋ ಅನ್ಸೋಷ್ಟು, ತಾತ್ಸಾರವಾಗಿ ಅದರ ಕಡೆ ನೋಡಿದರು. ಜೋರಾಗಿ ನಗುತ್ತಾ ನನ್ನ ಬೆನ್ನ ಮೇಲೆ ಒಂದು ಏಟುಹಾಕಿ " ಹಾ! ಹ್ಹಾ! ಹ್ಹಾ!!!, ಏನು ಸ್ವಾಮಿ ನೀವು, ಇಷ್ಟಕೆಲ್ಲ ಹೀಗೆ ಪ್ಫಾರ್ಮಲ್ಲಗಿ ಬಿಟ್ರೆ ಹೇಗೆ ಹೇಳಿ. ಮಕ್ಕಳು ತೀಟೆ ಮಾಡದೆ ನಾವು - ನೀವು ತೀಟೆ ಮಾಡಕ್ಕೆ ಆಗುತ್ಯೇ?" ಅಂತ ಹೇಳೋದೆ?! ಮತ್ತೊಂದು ಧರ್ಮದೇಟು ಬೆನ್ನ ಮೇಲೆ ಹಾಕಿ, ಕೈ ಕುಲುಕುತ್ತಾ ಜೋರ್ ಜೋರಾಗಿ ನಾಗಡ್ಕೊಂಡು ಬೀಳ್ಕೊಟ್ಟರು. ಈ ದಿನಗಳಲ್ಲಿ ಸಹಾ ಇಂತಾ ಕೂಲ್ ಜನಾನೂ ಸಿಗ್ತಾರಾ ಅಂತ ನಾನು ಮನದಲ್ಲೆ ಅನ್ಕೊಂಡು ವಾಪಸ್ ಮನೆಗೆ ಬಂದೆ. ಅಲ್ಲಿ ವರೆಗು ಕಿಟಕಿನಲ್ಲೇ ಎಗರಿ ಎಗರಿ ಹೊರ ಜಗತ್ತಿನೆಲ್ಲಾ ನೋಡುತ್ತಿದ ನಮ್ಮನೆಯಾಕೆ, "ಏಷ್ಟು ಕೇಳಿದ್ರು ರೊಕ್ಕ?" ಅಂತ ಮುದ್ದು ಮಗನ ತಲೆ ಸವರುತ್ತ ನನ್ನ ಕಡೆ ಮುಖ ಮಾಡಿ ಕೇಳಿದಳು. ತಾರಮಯ್ಯ ಅಂತ ಹೀಗೇ-ಹೀಗೇ ಕೈ ಅಲ್ಲಾಡಿಸಿ "ಏನೂ ಕೇಳಲಿಲ್ಲ ಕಣೆ" ಅನ್ಕೊಂಡು ನೀರು ಕುಡಿಯಕ್ಕೆ ಅಂತ ಅಡುಗೆಮನೆ ಒಳಗಡೆ ನಡೆದೆ. ದುಡ್ಡು ಕೇಳಲಿಲ್ಲ ಅಂತ ನಂಬೋದಕ್ಕೆ ಆಗದೆ ನಿಂತ ಅವನ ತಾಯಿಯ ಕೈಗೆ ಕಿಟ್ಟಿ ಒಂದು ಸಣ್ಣ ಪ್ಯಾಕೇಟ್ ಕೊಟ್ಟು, ಮತ್ತೆ ಹೊರಗೆ ಆಟಾ ಆಡೋಕೆ ಅನ್ನೋ ನೆಪದಲ್ಲಿ ಇನ್ನೇನೋ ಮನೆಹಾಳು ಕೆಲಸ ಮಾಡೊದಕ್ಕೆ ಓಡಿ ಹೋದ. ಪ್ಯಾಕೇಟ್ ನಲ್ಲಿ ಏನಪ್ಪ ಇದೆ ಅಂತ ನೋಡಿದ್ರೆ, ಒಂದು ಉದ್ದದ ಚಾಕ್ಲೇಟ್ ಕವರ್. ಮೇಲೆ ಒಂದು ಕಾಗದದ ಮೇಲೆ ಈ ಸಾಲುಗಳು ಇದ್ವು : " ಮುದ್ದು ಕಿಟ್ಟನ ತಂದೆ ಶ್ರೀ ನಂದಗೋಪಾಲ ಸ್ವಾಮಿ ಮತ್ತು ಯಶೋದಮ್ಮನವರಿಗೆ, ವಿನಾ ಕಾರಣ ನಮ್ಮ ಮನೆ ಬಾಗಿಲ ಬಗ್ಗೆ ನಿಮಗಾಗಿರ ಬಹುದಾದ ಮಾನಸಿಕ ತುಮುಲ ಶಮಿಸಲೆಂದು ಹಾರೈಸಿ, ಶುಭ ಕೋರುವ , ನಿಮ್ಮವರೇ ಆದ, ವಿಂಗ್ ಕಮಾಂಡರ್. ಖನ್ನಾ". ಕೆಟ್ಟ ಮಾತು ಆಡಿ ದುಡ್ಡು ವಸೂಲಿ ಮಾಡೋದಿರ್ಲಿ ಇಷ್ಟು ಸೌಜನ್ಯವಾಗಿ ಮಾತ್ನಾಡಿ ಉಡುಗೊರೆ ಬೇರೆ ಕಳ್ಸಿಯಾರೆ..ಅಬ್ಬಾ! ಇಂತ ನೆರೆ ಹೊರೆ ಪಡೆದ ನಾವೇ ಧನ್ಯರು ಅಂತ ಅನ್ಕೊಂಡ್ವಿ.
***
೨***
ಯಶೋದಮ್ಮ
ಇದ್ದ್ಕೊಂಡು " ರೀ, ಎಂಥಾ ಒಳ್ಳೆ ಜನ ಇವರು. ನಮ್ಮ ಮನೆಗೆ ಹೇಳ್ದೆ- ಕೇಳ್ದೆ ಚಾಕ್ಲೇಟ್ ಪಾಕೆಟ್ ಕಳ್ಸಿದ್ದಾರೆ, ನಾವು ಅವರಿಗೆ ಏನೂ ಕಳ್ಸ್ದೆ ಹೋದ್ರೆ ಚೆನ್ನಾಗಿರಲ್ಲ ಅಲ್ವೇ?" ಅಂತ ಹೇಳಿ, ಕಿಟ್ಟನಿಗೆ ಅಂತ ತೆಗ್ದಿಟ್ಟಿದ್ದ ಮಗ್ಗಿ ಪುಸ್ತಕಕ್ಕೆ ಬಣ್ಣದ ಕವರ್ ಹಾಕಿ, ಅವರ ಧಾಟಿಯಲ್ಲಿಯೇ ಒಂದು ಗೀಚುವಿಕೆ ಗೀಚಿದಳು: " ಮುದ್ದಿನ ಖನ್ನಾ ಗುಂಡನಿಗೆ , ಕಿಟ್ಟುವಿನಿಂದ ಮಗ್ಗಿ ಪುಸ್ತಕ! " ಅಂತ ಬರೆದು, ಜೂನಿಯರ್ ಖನ್ನಾಗೆ ಉಡುಗೊರೆಯಾಗಿ ಕಳ್ಸಿದ್ಲು. ಹೇಳಿದ ಕೆಲಸಾನ, ಒಂದೇ ಬಾರಿ ಹೇಳ್ಸ್ಕೊಂಡು ಯಾವತ್ತೂ ಮಾಡದೆ ಇದ್ದ ಕಿಟ್ಟ, ಅದೇನೋ ಇವತ್ತು ಮಹದಾಶ್ಚರ್ಯ, ಸರಕ್ಕಂತ ಓಡಿ ಹೋಗಿ, ಬ್ಲೇಡ್ ನಲ್ಲಿ ಬಾಗಿಲು ಕೆರೆದ ಮನೆಗೆ ಮಗ್ಗಿಪುಸ್ಥಕದ ಗಿಫ್ಟು ಕೊಟ್ಟು ಬಂದ. ಮುಯ್ಯಿಗೆ ಮುಯ್ಯಿ ಕೊಟ್ಟಿದೂ ಆಯಿತು, ಎರಡು ಮನೆಯವರಿಗೂ ಸಂತೋಷವೂ ಆಯಿತು ಅನ್ಕೊಂಡು, ಇನ್ನು ಶನಿವಾರದ ಮಿಕ್ಕ ಕೆಲ್ಸ ನೋಡೋಣ ಅಂತ, ನ್ಯೂಸ್ ಪೇಪರ್ ಹಿಡಿದು ಕುಳಿತೆ. ಇನ್ನೂ ಒಂದು ಪುಟ ಸಹಾ ಓದಿಲ್ಲ ನೆಮ್ಮದಿಯಾಗಿ, ಅಷ್ಟು ಹೊತ್ತಿಗೆ ಯಾರೋ ನಕ್ಷತ್ರಿಕ ಬಂದು "ಟ್ರಿನ್! ಟ್ರಿನ್!" ಅಂತ ಕರೆಘಂಟೆ ಬಾರಿಸಿದ. ಯಾರಪ್ಪ ಇದು... ಥೂ! ಅಂತ ಬೈಕೊಂಡು, ಬಾಗಿಲ ಬಳಿ ಹೋಗಿ ಕದ ತೆಗೆದ್ರೇ : ಒಂದು ಮನುಷ್ಯನಿಗಿಂತ ದೊಡ್ಡ ಹೂಕುಂಡ ಹಿಡ್ಕೊಂದು, ಕುಂಡದಲ್ಲಿ ಇರೋ ರೋಜಾ ಹೂಗಳ ಹಿಂದೆ ಅವಿತಿದ್ದ ಮನುಷ್ಯ ದನಿ "ಶುಭದಿನ ! ವಿಂಗ್ ಕಮಾಂಡರ್ ಖನ್ನ ಅವರ ಕಡೆ ಇಂದ ನಿಮ್ಮ ವಿಳಾಸಕ್ಕೆ ಗುಲ್ದಸ್ತಾ ತಂದೀವ್ನಿ ಸಾಬ್ ಅಂದ. ಹೂಗಳನ್ನ ಒಳಗಿರಿಸಿ ಕೊಂಡು, ಹೂತಂದವನಿಗೆ ಬಕ್ಷೀಸು ಕೊಟ್ಟು ಕಳಿಸಿದೆ. ಏರಡೂ ಕೈಗಳಲ್ಲಿ ವಾರಗಟ್ಲೆ ಸಾಮನುಗಳನ್ನ ಖರೀದಿ ಮಾಡ್ಕೊಂಡು, ಹೊರಲಾರದೆ ಹೊತ್ತು ಕೊಂಡು ಬಂದ ಯಶೋದಮ್ಮ, ಬಂದವಳೆ ಹೂಗುಚ್ಛ ನೋಡಿ ತುಂಬಾ ಮೆಚ್ಕೊಂಡ್ರು. ಖನ್ನಾ ಕಳ್ಸಿದ್ದು ಅಂತ ತಿಳೀತಿದ್ದ ಹಾಗೆ "ಇವತ್ತು ಅವರನ್ನ ಚಹಾಗೆ ನಮ್ಮ ಮನೆಗೆ ಕರ್ಯೋಣ!" ಅಂತ ಘೋಷಣೆ ಮಾಡಿ ಬಿಟ್ಲು. "ಇವ್ವತ್ತೇನಾಆಅ!!! " ಅಂತ ನಾನು ಬಾಯಿ ಬಿಡೋಷ್ಟರಲ್ಲಿ ಅಡುಗೆ ಮನೆನಲ್ಲಿ ಪಕೋಡ ಕರಿಯೋಕೆ ಹೋಗೆ ಬಿಟ್ಲು. ಇಲ್ಲಿ ಕಿಟ್ಟ ಗುಂಡನನ್ನ ಕರಿಯೋಕೆ ಹೋಗೆ ಬಿಟ್ಟ. ಮಧ್ಯದಲ್ಲಿ ನಾನು ಅರೆ ಬರೆ ಓದಿ ಮಧ್ಯದಲ್ಲೇ ಬಿಟ್ಟ ನ್ಯೂಸ್ ಪೇಪರ್ ಹಿಡಿದು ನಿಂತಿದ್ದೆ.
***

***
ಸಂಜೆ ನಾಲ್ಕು ಘಂಟೆ ಆಯಿತು. ಟೀ ಪಾರ್ಟೀಗೆ ಬರೋದು ಬಂದ್ರು , ಬರಿಗೈ ನಲ್ಲಿ ಬರಬಾರ್ದಾ ನಮ್ಮ ಅಥಿತಿಗಳು? ಕೈನಲ್ಲಿ ಐದು ವಿಧವಾದ ಹಣ್ಣಿನ ಬುಟ್ಟಿಗಳು; ಬೋಂಡಾ-ಬಜ್ಜಿ ಮಾಡಕ್ಕೆ ಹಾಗಲ್ಕಾಯಿ, ಹೀರೆಕಾಯಿ, ಪಡವಲ್ಕಾಯಿ, ಗೆಡ್ಡೆ ಗೆಣೆಸು ಇನ್ನೂ ಏನೇನೋ ಹೊತ್ತ್ಕೊಂಡು ಅರ್ಧ ಸಿಟಿ ಮಾರ್ಕೆಟ್ನೆ ನಮ್ಮ ಮನೆಗೆ ತರೋಹಾಗೆ ತಂದಿದ್ದ ಆ ವಿಂಗ್ ಕಮಾಂಡರ್. ಮದುವೆ ಮನೆಗೆ ಕಾಂಟ್ರಾಕ್ಟ್ ತೊಗೊಂಡವ್ರು ಸಹ ಹೀಗೆ ಸಾಮಾನು ತರಲ್ಲ ಬಿಡಿ. ವರ್ಷಕ್ಕೆ ಆಗೋ ಅಷ್ಟು ಸರಕು ತಂದು ನಮ್ಮ ಮನೆ ತುಂಬ್ಸಿದ್ರು, ಅವನ ಈ ಅತಿರೇಕ ನೋಡಿ ನನಗೆ ಮೈ ಎಲ್ಲಾ ಉರಿದು ಹೋಯ್ತು. ಇತ್ತ ಖನ್ನಾ ಹೆಂಡತಿ ಚಿನ್ನಾದೇವಿ, ಯಶೋದಮ್ಮ ಇಬ್ಬರೂ ಹರಟೆ ಹೊಡೆದೂ ಹೊಡೆದೂ ನನ್ನ ಕಿವಿ ತೂತು ಮಾಡಿದ್ರೆ, ಈವಯ್ಯ ಚಾವಣಿ ಕಿತ್ತು ಹೋಗೋ ಹಾಗೆ ಸುಮ್ಸುಮ್ನೆ ಸಡನ್ನಾಗಿ ನಗೋದು. ಕಿಟ್ಟಾ, ಗುಂಡಾ ಒಡ್ಕೊಂಡು, ಚೀರ್ಕೊಂಡು, "ಆಡ್ಕೊಂಡು" ಎಂದಿನಂತೆ ರಂಪ ರಾಮಾಯಣ ಮಾಡ್ತಾ ಇದ್ರು. ನೆಮ್ಮದಿಯಾಗಿ ಇರೋಣ ಅನ್ಕೊಂಡಿದ್ದ ಒಂದು ಶನಿವಾರವೂ ವ್ಯರ್ಥವಾಯಿತು ಅಂತ ನಾನಿದ್ರೆ, " ರೀ, ಎಂಥಾ ಒಳ್ಳೆ ಜನ ಇವರು. ನಮ್ಮ ಮನೆಗೆ ಹೇಳ್ದೆ- ಕೇಳ್ದೆ ಇಷ್ಟೆಲ್ಲ ತಂದಿದ್ದಾರೆ, ಇವರನ್ನ ಊಟಕ್ಕೆ ಕರೀದೆ ಇದ್ರೆ ಚೆನ್ನಾಗಿರಲ್ಲ" ಅಂತ ಯಶೋದಮ್ಮ ರಾತ್ರಿ ಊಟಮಾಡ್ಕೊಂಡು ಹೋಗಿ ಅಂದೇ ಬಿಟ್ಲು, ಅವರೂ ಸಹಾ ಕೇಕೆ ಹಾಕ್ಕೊಂಡು ನಗ್ತಾ 'ಹೂಂ! ಸರಿ' ಅಂದೇ ಬಿಟ್ರು. ಮತ್ತೆ ಸೆಕೆಂಡ್ ಇನ್ನಿಂಗ್ಸ್ ಹರಟೆ, ಪುರಾಣ ಶುರುವಾಯ್ತು. ಮಧ್ಯರಾತ್ರಿ ಕಳೆದು ಏರಡು ಘಂಟೆ ಕಳೆದರೂ ಇನ್ನೂ
***

***
ಭಾನುವಾರ
ಬೆಳ್ಳಂಬೆಳಗ್ಗೆ, ಇನ್ನೂ ಸರಿಯಾಗಿ ಬೆಳಕು ಹರಿದು ಆರು ಘಂಟೆ ಸಹಾ ಆಗಿಲ್ಲ, ಅಷ್ಟು ಬೇಗ ಅವನ ದುಬಾರಿ ಕಾರಿನಲ್ಲಿ, ಖನ್ನಾ ಅವನ ರಿಸಾರ್ಟ್ ರೀತಿ ಇರೋ ತೋಟದ ಮನೆಗೆ ಕರೆದುಕೊಂಡು ಹೋಗಲು ಬಂದ. ಇನ್ನೂ ಗುರುತು ಪರಿಚಯ ಆಗಿ ಎರಡು ದಿನಾ ಸಹಾ ಆಗಿಲ್ಲ, ಅತಿ ಸಲಿಗೆ, ಸಾಮಾನ್ಯಕ್ಕಿಂತ ಹೆಚ್ಚು ಅನ್ನಿಸುವಷ್ಟು ಸ್ನೇಹ ತೋರಿಸ್ತಿದ್ದ ಅನ್ನೋ ಮುಜುಗರ ಒಂದು ಕಡೆ ಆದ್ರೆ, ಇವನು ಆಡೋ ಆಟಕ್ಕೆ ಸರಿ ತೂಗೋ ಹಾಗೆ ನಾವೂ ಸೂಕ್ತ ರೀತಿ ಅವನಿಗೆ ಶಾಂತಿ ಮಾಡಿಸಬೇಕಲ್ಲ ಅಂತ ಪೀಕಲಾಟ ಇನ್ನೊಂದು ಕಡೆ. ಕಡೆಯೇ ಇಲ್ಲವೇನೋ ಅನ್ನಿಸುವಷ್ಟು ಬೆಳಕೊಂಡ ಅವನ ಹೊಲ-ಗದ್ದೆ ಹತ್ರ, ಬಂಗಲೇ ಅಂತಲೇ ಅನ್ನ ಬಹುದಾದಂತ ತೋಟದ ಮನೆ ಬೇರೆ. ಯಾರ ಮನೆ ಕನ್ನ ಹಾಕಿ ಕೋಟ್ಯಾಧೀಶ್ವರ ಆದ್ನೋ ಈ ಖನ್ನಾ. ನಮ್ಮನ್ನ ಒಳಗೆ ಬರಮಾಡಿಕೊಂಡು ರಜೋಪಚರಾನೋ ರಾಜೋಪಚಾರ. ಏನ್ ಅಥಿತಿ ಸತ್ಕಾರ! ಏನ್ ಅತಿಥಿ ಸತ್ ಕಾರ! ಒಂದು ಬಾಯಿ ನಲ್ಲಿ ಹೇಳೋದಕ್ಕೆ ಆಗೋದಿಲ್ಲ. ನಿನ್ನೆ ರಾತ್ರಿ ಕಂಠಪೂರ್ತಿ ಮೆಕ್ಕಿದ್ದೇ ಅರಗದೆ ಇನ್ನೂ ಹಳೇ ತೇಗು ಬರ್ತಾ ಇದೇ ಅಂದ್ರೆ, ಬೇಡ ಬೇಡ ಅಂದ್ರೂ ಕೇಳದೆ, ಹತ್ತು ರೀತಿ ಸಿಹಿ ತಿನಿಸುಗಳ್ಳೆಲ್ಲಾ ಮಾಡಿಸಿ ಸಿಹಿ ಊಟದಲ್ಲೇ ಸಾಯಿಸ್ಬಿಟ್ಟ. ಅದೂ ಸಾಲ್ದು ಅಂತ ನಮ್ಮಿಬರಿಗೂ ವೀಳ್ಯಕ್ಕೆ ಅಂತ ಭಾರಿ ಆಗಿರೋ ಕಾಂಚೀಪುರಂ ಝರತಾರಿ ಸೀರೆ ಮತ್ತೆ ರೇಶ್ಮೆ ಶಲ್ಯ ಬೇರೆ ಉಡುಗೋರೆ ತಾಂಬೂಲ ಕೊಟ್ಟ. ಇವರ ಅಬ್ಬರಕ್ಕೆ ಸರಿ ತೂಗುವಷ್ಟು ಅಲ್ಲದೆ ಆದ್ರೂ ನನ್ನ ಆದಾಯಕ್ಕೆ ಸರಿ ಹೊಂದೋ ಹಾಗೆ, ತಕ್ಕ ಮಟ್ಟಿಗೆ ಮುಯ್ಯಿಮಾಡ್ಲೇ ಬೇಕಲ್ಲ ಅನ್ನೋ ಭಾವನೇ ಇಂದ ಬೆವೆತು ಕೊಟ್ಟ ರೇಶ್ಮೇ ಶಲ್ಯಾನಲ್ಲೆ ಬೆವರು ಒರ್ಸ್ಕೋತಾ ಓರೆಗಣ್ಣಿನಲ್ಲಿ ಇವಳ ಮುಖ ನೋಡಿದ್ರೆ, ನೀ ಯಾರಿಗಾದೆಯೋ ಎಲೆಮಾನವ' ಅನ್ನೋ ದೃಶ್ಟಿನಲ್ಲಿ ನನ್ನ ಕೆಕ್ಕರಿಸಿಕೊಂಡು ನೋಡ್ತಾ ಇದಾಳೆ ನಮ್ಮಾಕೆ. ಮೊಣಕೈ ನಲ್ಲಿ ನನ್ನ ಹೊಟ್ಟೆ ತಿವಿದು, 'ದಂಪತಿಗಳಿಗಾದರೂ ಏನೂ ತರ್ಲಿಲ್ಲ, ಮಗುವಿಗಾದ್ರೂ ಏನಾದ್ರು ಕೋಡ್ಸಿ ಬನ್ನಿ' ಅಂತ ಸನ್ನೆ ಮಾಡಿದ್ಲು. ಕಿಟ್ಟ ಗುಂಡಾ ಇಬ್ಬರ್ನೂ ಪೇಟೆ ಬೀದಿಗೆ ಕರ್ಕೊಂಡು ಹೋದೆ, ಬೆಂಡು ಬತ್ತಾಸು ಕೋಡ್ಸೋಣ ಅಂತ. ಗುಂಡ ಖನ್ನ ಕುದುರೆ ಕೊಡಿಸಿ ಅಂಕಲ್ ಅಂದ. ಆಟದ ಕುದುರೆ ಕೇಳ್ತಾನೇನೊ ಅನ್ಕೊಂಡ್ರೆ ಜೀವಂತವಾಗಿರೋ ರೇಸ್ ಕುದುರೆ ಕೇಳ್ತಾ ಇದ್ದ ಆ ಮಗು. ಅಪ್ಪನ ಹಾಗೆ ಮಗನಿಗೂ ಅಬ್ಬರ ಆರ್ಭಟ ಜಾಸ್ತಿ. ನನಗೆಲ್ಲಿ ಬರಬೇಕು ನಿಜವಾದ ಕುದುರೆ ಕೊಡಿಸೋ ಅಷ್ಟು ಹಣ ಅಂತ ಸುಮ್ಮನಾದೆ. ಅಷ್ಟರಲ್ಲಿ ಅವನಪ್ಪ ಬಂದು ಆ ಕುದುರೆನ ಹಣ ಕೊಟ್ಟು ಖರೀದಿಸಿಯೇ ಬಿಟ್ಟ.
***To be con......

Wednesday, March 05, 2008

ಶ್ರೀರುದ್ರಂ - ಚಮಕಂ ಮತ್ತು ಆನಂದ ಮೀಮಾಂಸೆ

ನಮಸ್ತೇ ಅಸ್ತು ಭಗವನ್ವಿಶ್ವೇಶ್ವರಾಯ ಮಹಾದೇವಾಯ ತ್ರ್ಯಂಬಕಾಯ ತ್ರಿಪುರಾಂತಕಾಯ ತ್ರಿಕಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ ಮೃತ್ಯುಂಜಯಾಯ ಸರ್ವೇಶ್ವರಾಯ ಸದಾಶಿವಾಯ ಶ್ರೀ ಮನ್ಮಹಾದೇವಾಯ ನಮಃ ||

ಮಹಾಶಿವರಾತ್ರಿಯ ಪಾವನಪರ್ವವಾದ ಈ ದಿನ ದೇಶದೆಲ್ಲೆಡೆ ಮಹಾದೇವನಿಗೆ ರುದ್ರಾಭಿಷೇಕದ ಆರಾಧನೆ ನಡೆಯುತ್ತಿದೆ. ತುಂಬು ಕೊರಳಿನಲ್ಲಿ ಘಂಟಾಘೋಷವಾಗಿ ಉದಾತ್ತ ಅನುದ್ಧಾತ್ತ ಗಳ ಏರಿಳಿತಗಳ ಮೆರುಗಿನಲ್ಲಿ ಸ್ವರಬದ್ಧವಾಗಿ ವಿಪ್ರೋತ್ತಮರು ವೇದಘೋಶ ಮಾಡುವುದನ್ನು ಕೇಳಲು ಎರಡು ಕಿವಿಗಳು ಸಾಲದು. ಕೃಷ್ಣಯಜುರ್ವೇದದ ತೈತ್ತರೀಯ ಸಂಹಿತೆಯಲ್ಲಿ, ’ನಮಃ ಶಿವಾಯ’ ಎಂಬ ಶಿವಪಂಚಾಕ್ಷರೀ ಮಂತ್ರವನ್ನು ಸಾರುವ ರುದ್ರಾಧ್ಯಾಯವನ್ನು ’ರೂದ್ರೋಪನಿಷದ್’ ಎಂದೂ ಕರೆಯಲಾಗಿದೆ. ಶ್ರೀ ರುದ್ರವು ಸಾಲಿಗ್ರಾಮಗಳ ಅಭಿಷೇಕ, ವಿಷೇಶ ಪೂಜೆಯೇ ಅಲ್ಲದೆ, ನಿತ್ಯಪಾರಾಯಣಕ್ಕೂ ಹೇಳಿಮಾಡಿಸಿದ ವೇದ ಮಂತ್ರ.
ಸ್ವಶಾಖೋಪನಿಷದ್ ಗೀತಾ ವಿಷ್ಣೋರ್ನಾಮ ಸಹಸ್ರಕಂ|
ರುದ್ರಂ ಚ ಪೌರುಷಂ ಸೂಕ್ತಂ ನಿತ್ಯಮಾವರ್ತಯೇತ್ ಬುಧಃ ||

ಎಂಬುವಲ್ಲಿ, ಸ್ವ ಶಾಖೆಯ ಉಪನಿಷತ್ತಾಗಲೀ, ಗೀತೆಯಾಗಲೀ , ವಿಷ್ಣು ಸಹಸ್ರನಾಮವಾಗಲೀ, ರುದ್ರಾಧ್ಯಾಯವಾಗಲೀ, ಪುರುಷಸೂಕ್ತವಾಗಲೀ ನಿತ್ಯಪಾರಾಯಣಕ್ಕೆ ಸೂಕ್ತ ಮಂತ್ರಗಳು ಎಂಬ ಪ್ರತೀತಿ ಇದೆ.ದಕ್ಷಿಣಭಾರತದ ಗೇಯಪಾಠ ವಿಧಾನದಲ್ಲಿ, ತಮಿಳುನಾಡಿನ ಶಿವ ದೇಗುಲಗಳಲ್ಲಿ ಲಿಂಗಾಭಿಷೇಕ ಮಾಡುವಾಗ ಒಕ್ಕೊರಳಿನಲ್ಲಿ ಪಠಿಸುವುದು ಕೇಳುವುದೆಂದರೆ ಮಹಾತ್ಮಾ ಗಾಂಧಿಯವರಿಗೆ ಅತ್ಯಂತ ಪ್ರೀತಿಯಿತ್ತೆಂದು ಶ್ರೀ ಟಿ.ಆರ್.ರಾಜಗೋಪಾಲರು ತಮ್ಮ ’ರುದ್ರ-ಚಮಕ ಭಾಷ್ಯದಲ್ಲಿ’ ಒಂದೆಡೆ ಹೇಳಿದ್ದಾರೆ.ಶ್ರೀರುದ್ರದ ಜೊತೆಗೆ ಕೇಳಿ ಬರುವುದು ಚಮಕ ಪ್ರಶ್ನಾ. ’ವಾಜಸ್ ಚ ಮೆ (ವಾಜಃ + ಚ), ಪ್ರಸವಸ್ ಚ ಮೆ, ಪ್ರಯತಿಸ್ ಚ ಮೆ...’ ಹೀಗೆ ಮಂತ್ರಭಾಗದಲ್ಲಿ ’ಚ ಮೇ, ಚ ಮೇ’ ಎಂದು ಬಹಳಬಾರಿ (೩೪೭ ಬಾರಿ) ಹೇಳುವುದರಿಂದ ಇದು ’ಚಮಕ’ ಎಂದು ಪ್ರಸಿದ್ದವಾಗಿದೆ.ಯಾವ ಪ್ರಿಯ - ಅನುಕಾಮಗಳಿಂದ ಜೀವಿಯು ಇಹ-ಪರಗಳಲ್ಲಿ ಆನಂದದಿಂದ ಇರುವನೂ ಅಂತಹ ವಸ್ತುಗಳ ಕುರಿತು ಪ್ರಾರ್ಥನೆ ಚಮಕದಲ್ಲಿ ಇದೆ. "ಎಲೈ ದೇವತೆಗಳೇ ! ನಮಗೆ ಆಹಾರವನ್ನು ಕಲ್ಪಿಸಿ (ವಾಜಸ್ ಚ ಮೇ ಕಲ್ಪಂತಾಂ), ಆಧಿಪತ್ಯವನ್ನು ಕರುಣಿಸಿ, ಸುಮತಿಯನ್ನು ನೀಡಿ" -- ಇತ್ಯಾದಿಯಾಗಿ ಮೊದಲನೇ ಅನುವಾಕದಲ್ಲಿನ ಆಹಾರದಿಂದ ಹಿಡಿದು ಕೊನೆಯ ಅನುವಾಕದ ಯಙ್ನ ಸಿದ್ಧಿ - ಯಙ್ನ ಕ್ಲಿಪ್ತಿಗಳವರೆಗೂ ಇಲ್ಲಿ ಮಂತ್ರ ಪುಂಜಗಳಿವೆ. ಆನಂದವೆಂದರೆ ಏನು? ಅತ್ಯುನ್ನತ ಆನಂದ ಯಾವುದರಿಂದ ದೊರೆಯುತ್ತದೆ? ಈ ಆನಂದದ ಸ್ವರೂಪವೇನು -- ಹೀಗೆ ಪ್ರಶ್ನಿಸಿ, ಆಳವಾದ ವಿಶ್ಲೇಷಣೆಗಳಿಂದ ಕೂಡಿದ ಪರೀಕ್ಷೆ, ಕೂಲಂಕಷವಾದ ಶಾಸ್ತ್ರಾಧ್ಯಯನ, ಎಲ್ಲ ಮಗ್ಗಲುಗಳಿಂದಲೂ ಒಂದು ವಿಷಯವನ್ನು ನೋಡಿ ಸಮನ್ವಯಿಸಿ ವಿಶ್ಲೇಷಿಸುವದು ಆನಂದ ಮೀಮಾಂಸವೆನಿಸುತ್ತದೆ. ಜಗತ್ತಿನ ಎಲ್ಲ ದರ್ಶನಗಳಲ್ಲಿಯೂ ಈ ಪ್ರಶ್ನೆಗೆ ಉತ್ತರವನ್ನು ಹುಡುಕಿ ಹೊರಟಿದ್ದಾರೆ. ವೇದ ವಾಂಙ್ಮೆಯಲ್ಲಿ ತೈತ್ತರೀಯ ಉಪನಿಷತ್ತಿನ ಬ್ರಹ್ಮಾನಂದ ವಲ್ಲಿಯ ೮ನೇ ಅನುವಾಕ ಮತ್ತು ಬೃಹದಾರಣ್ಯಕ ೩ನೇ ಬ್ರಾಹ್ಮಣ, ೪ನೇ ಅಧ್ಯಾಯಗಳು ಈ ವಸ್ಥುವನ್ನು ಚರ್ಚಿಸುತ್ತವೆ. ಪ್ರಸ್ತುತ ಚಮಕದಲ್ಲಿ ಹನ್ನೊಂದು ಅನುವಾಕಗಳಲ್ಲಿ ಜೀವಿಯನ್ನು ಸಂತೋಷವಾಗಿರಿಸುವ ಸಾಧನಗಳ ಕುರಿತು ಪ್ರಾರ್ಥನೆ ಇರುವುದರಿಂದ ಇದನ್ನು ಆನಂದಾಭೀಷ್ಟದಾಯಿನೀ ಎನ್ನಲಾಗಿದೆ.

Monday, March 03, 2008

ಶತಪಥ ಬ್ರಾಹ್ಮಣ



ನಮ್ಮ ಕಛೇರಿಯಲ್ಲಿನ ಶ್ರೀಪಾದರಾಯರು ಸಾಗರೋಲ್ಲಂಘನ ಮಾಡಿ ಫ್ಲಾರಿಡಾ ತಲುಪಿದರೂ ಮುಖದ ತುಂಬ ಲಕ್ಷಣವಾಗಿ ಸಾಧುವನ್ನಿಟ್ಟುಕೊಂಡು ಬರುತ್ತಿದ್ದ ಮಡಿ ಮಾಧ್ವರು. ಇಲ್ಲಿನ ಕೆಲವು ಲ್ಯಾಟೀನಾ ಲಲನಾಮಣಿಗಳು ಅದನ್ನು ಕಂಡು ಟ್ರೆಂಡೀ ಟಾಟೂ (Trendy Tatoo) ಅಂತಲೂ ಅಂದುಕೊಂಡು, ರಾಯರನ್ನು ಮೆಚ್ಚಿಕೊಂಡದ್ದೂ ಉಂಟು. ಆಚಾರ ವಿಚಾರಗಳಲ್ಲಿ ಶ್ರೀಪಾದರು ದೂರದೂರಿನಲ್ಲಿ ಇದ್ದರೂ ಚಾಚೂ ತಪ್ಪದಂತೆ ಪರಿಪಾಲಿಸುವ ಸಂಪ್ರದಾಯಸ್ಥರು. ನಡೆದಾಡುತ್ತಿರುವಾಗ ಅವರ ಬೆಲ್ಟ್ ಗೆ(belt) ವಾಚ್(watch) ಹಾಗೆ ಒಂದು ಯಂತ್ರವನ್ನು ಕಟ್ಟಿರ್ತಾರೆ. ಗಾಂಧಿ ವಾಚ್ ರೀತಿ ಸೊಂಟಕ್ಕೆ ಕಟ್ಟಿದ ಒಂದು ಸಾಧನ ಅದು. ನಡೆಯುವಾಗ ಆಗಾಗ್ಗೆ ಅದನ್ನು ನೋಡುತ್ತಿದ್ದುದನು ನಾವೆಲ್ಲರು ಸಹೋದ್ಯೋಗಿಗಳು ಗಮನಿಸಿದ್ದೆವು. ಒಂದು ದಿನ ಅವರು ಆ ಸಾಧನದೆಡೆಗೆ ಕಣ್ಣು ಹಾಯಿಸಿ ಮೆಲ್ಲಗೆ ಮುಗುಳ್ನಕ್ಕರು. ಕುತೂಹಲ ತಡೆಯದಾಗದೆ ಏನೆಂದು ಕೇಳಿದೆವು. ಇದು 'ವಾಕ್ ಮಾನಿಟರ್' (Walk monitor) ಅಂತ ವಿವರಿಸಿದರು. ಸೊಂಟಕ್ಕೆ ಕಟ್ಟಿಕೊಂಡು ಬೆಳಗಿನಿಂದ ಸಂಜೆವರೆಗೂ ಅಡ್ಡಾಡುತ್ತಿದ್ದರೆ, ಅದು ನಾವು ಅಷ್ಟು ಹೆಜ್ಜೆ ಹಾಕಿದ್ದೇವೆ ಅಂತ ಗಣನೆ ಮಾಡಿ ತೋರಿಸುವುದಂತೆ. ಒಳ್ಳೆ ಹರಕೆ ತೀರಿಸಕ್ಕೆ ಹೆಜ್ಜೆ ನಮಸ್ಕಾರ ಹಾಕೋ ಹಾಗೆ ಇದೇನಪ್ಪ ಹೆಜ್ಜೆ ಮಾಪಕ ಅಂದ್ರೆ, ಅದ್ರಲ್ಲೂ ಒಂದು ಲಾಜಿಕ್ ಕಂಡಿದ್ದರು ನಮ್ಮ ರಾಯರು. ನಾನು ಕೆಲ್ಸ ಮಾಡುತಿರುವುದು ಫ್ಲಾರಿಡಾದಲ್ಲಿನ ಮಯಾಮಿಯ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯಲ್ಲಿ. ಸುಮಾರು ನೂರುವರ್ಷಕ್ಕಿಂತ ಹೆಚ್ಚು ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಈ ಕಂಪನಿ ಮನೆ ಮಾತಾಗಿದೆ. ಇಲ್ಲಿನ ಮಾನವ ಸಂಪನ್ಮೂಲ ಅಧಿಕಾರಿಗಳು ಉದ್ಯೋಗಿಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಬರಲೆಂದು ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆಫೀಸಿಗೆ ಸೈಕಲ್ ನಲ್ಲಿ ಬರುವುದಕ್ಕೆ ಪ್ರೋತ್ಸಾಹಿಸುವುದು, ರಕ್ತದಾನ ಶಿಬಿರಗಳು, ಕಚೇರಿಯಲ್ಲಿ ಸಂಪೂರ್ಣ ಧೂಮಪಾನ ನಿಶೇಧ, ಹೀಗೆ ಹಲವಾರು ಕಾರ್ಯಕ್ರಮಗಳು. ಇಂತಹುದರಲ್ಲಿ ಒಂದು ಈ ’ವಾಕ್ ಮಾನಿಟರ್’. ಉದ್ಯೋಗಿಗಳು ಹೆಸರು ನೊಂದಾಯಿಸಿ ಕೊಂಡರೆ ಇದನ್ನು ಉಚಿತವಾಗಿ ನೀಡುತ್ತಾರೆ. ನಮ್ಮ ಕಚೇರಿಯಲ್ಲಿ ಕೆಲಸಮಾಡುವ ಬಹುತೇಕ ಜನ ದಿನವಿಡೀ ಮೇಜು ಕುರ್ಚಿಗಳನ್ನು ಬಿಟ್ಟು ಕದಲುವುದೇ ಇಲ್ಲ. ಕೆಲಸದ ಓತ್ತಡ ಹೆಚ್ಚಿದ್ದರಂತು ಶಿಲೆಗಳ ಹಾಗೆ ತಟಸ್ಥರಾಗಿ ಕುಳಿತು ಕೆಲಸ ಮಾಡುವ ವಾಡಿಕೆ(sedentary lifestyle). ಹೀಗಿರಲು ಈ ವಾಕ್ ಮಾನಿಟರ್ , ಜನರನ್ನು ನಡೆದಾಡಲು ಪ್ರೇರೇಪಿಸುತ್ತದೆ. ನಾವು ಮೀಟಿಂಗ್ ಗಳಿಗೆ ಹೋಗುವಾಗ, ಇತರೆ ಕಛೇರಿಗಳಿಗೆ ಹೋಗುವಾಗ, ಲಿಫ್ಟ್ ಗಳಲ್ಲಿ ಸಂಚರಿಸುವಾಗ -- ಹೀಗೆ ಆಗಾಗ್ಗೆ ನಡೆದಾಡಿದರೆ, ಅದೇ ವ್ಯಾಯಾಮದ ಹಾಗೆ. ದಿನಕ್ಕೆ ಸರಾಸರಿ ೧೦೦೦೦ ಹೆಜ್ಜೆಗಳನ್ನು ಒಬ್ಬ ಚಟುವಟಿಕೆ ಇಂದ ಕೂಡಿದ ಮನುಷ್ಯ ನಡೆಯಬೇಕಂತೆ. ಈ ಸಾಧನ ನಮ್ಮ ಸೊಂಟಕ್ಕೆ ಕಟ್ಟಿದ್ದರೆ, ನಾವು ಅದನ್ನು ನೋಡಿದಾಗಲೆಲ್ಲ ಈ ದಿನದ ಕೋಟಾ(quota) ಮುಗಿಸಬೇಕೆಂದು ಕರೆಘಂಟೆಯ ರೀತಿ ಹೇಳುತ್ತದೆ. ಊಟದ ನಂತರ ಕಿರು ನಡುಗೆ ಯಾದರೂ ಆದೀತು, ಸಂಜೆ ಕಾಫಿ ಹೀರುವ ನೆಪದಲ್ಲಿ ಕೆಲ ಹೆಜ್ಜೆ ಹಾಕಿದರೂ ಆದೀತು. ಅಂತು ಪ್ರತಿದಿನವೂ ೧೦೦೦೦ ಹೆಜ್ಜೆಗಳ ಮೈಲಿಗಲ್ಲನ್ನು ಇರಿಸಲು ಈ ಸಾಧನ ಸಹಕಾರಿಯಾಗಿದೆ. ಐ-ಪಾಡ್ ಮತ್ತಿತರ ಸಾಧನಗಳಲ್ಲಿಯೂ ಇದನ್ನು ಅಳವಡಿಸಿ , ಒಂದೆ ಕಲ್ಲಿನಲ್ಲಿ ಏರಡು ಹಕ್ಕಿಗಳನ್ನು ಹೊಡೆಯ ಬಹುದಂತೆ.ಆ ದಿನ ವಾಕ್ ಮೀಟರ್ ನೋಡಿ ಮುಗುಳ್ನಕ್ಕ ರಾಯರು, ಆಗತಾನೆ ೧೦೦೦೦ ಹೆಜ್ಜೆ ಹಾಕಿ ’ಶತಪಥ’ ಬ್ರಾಹ್ಮಣರಾಗಿದ್ದರಂತೆ!

ಇದೀಗ ಬಂದ ಸುದ್ದಿ: ಹೆಜ್ಜೆಗಣನೆ ಮಾಡುವ ಈ ಪೆಡೋಮೀಟರುಗಳು ದೇವತೆಗಳಿಗೆ ಉಪಯೋಗ ವಾಗುತಿಲ್ಲವಂತೆ! ಈ ಮಾಹಿತಿ ದೊರೆತ ಮಹತೀ ಹಿಡಿದ ನಾರದರು ಮುಂಜಾನೆ ಕಟಿಬದ್ಧರಾಗಿ ಹೊರಟರಂತೆ. ತ್ರಿಲೋಕಸಂಚಾರಿಗಳಿಗೆ ರೇಂಜ್ ದಾಟಿದಕ್ಕೆ ತಪ್ಪು ರೀಡಿಂಗ್ ಬಂದರೆ, ಇತ್ತ ದಿನವೆಲ್ಲ ಲೋಕರಕ್ಷಣೆಯ ಸಲುವಾಗಿ ಅಲೆದಾಡಿದ ಪಾಲ್ಗಡಲ ಶ್ರೀಹರಿಯ ಪದಕಮಲ ಹಿಸುಕುತ್ತಿದ್ದ ಶ್ರೀಲಕ್ಷ್ಮಿಗೂ ಸಹ ತಪ್ಪು ರೀಡಿಂಗ್ ಬಂದಿದೆ. 'ಹೆಜ್ಜೆಯ ಮೇಲೊಂದ್ ಹೆಜ್ಜಯನಿಟ್ಟು' ಬಂದ್ರೆ ಪಾಪ ವಾಕ್ ಮೀಟರ್ ಏನು ತಾನೆ ಮಾಡತ್ತೆ?

***


* -- http://en.wikipedia.org/wiki/Pedometer

* -- ಶತಪಥ ಬ್ರಾಹ್ಮಣ : ಶುಕ್ಲ ಯಜುರ್ವೇದದ ಕಾಣ್ವ ಶಾಖೆಯ ಬ್ರಾಹ್ಮಣ - ಇದಕ್ಕೆ ಶ್ಲೇಷಾಲಂಕಾರ ಪ್ರಯೋಗ - ಶತಪಥ ಬ್ರಾಹ್ಮಣ.

Tuesday, February 26, 2008

ಹಿಂದೋಳ ವಸಂತ, ಶೃಂಗಾರ ಸಂಕೀರ್ತನೆ ಮತ್ತು ಪುರುಷಾರ್ಥ ಕುರಿತು


ಸಂಜೆ ಕಳೆದು ಮೂರ್ತಾಸಾಗಿತ್ತು. ಬಾಂದಳದಲ್ಲಿ ನಿಶಾದೇವಿ ಆವರಿಸಿದ್ದರೂ, ’ಆಧಾ ಹೈ ಚಂದ್ರಮಾ, ರಾತ್ ಆಧಿ...’ ಅನ್ನುವಷ್ಟು ಹೊತ್ತು ಕಳೆದಿರಲಿಲ್ಲ. ಇನ್ನೂ ಎಳಸೆನಿಸುವ ರಾತ್ರಿ ವೇಳೆಯಲ್ಲಿ ವಸಂತಮಾಸದ ಸುವಾಸನೆಯುತ ಅಲರೆಲರ ರೀತಿ ಅಲೆ ಅಲೆಯಾಗಿ ಕೇಳಿಸಿದುದು ಹಿಂದೋಳವಸಂತ ರಾಗದ ಅನ್ನಮಾಚಾರ್ಯರ ’ಜಗಡಪು ಚನವುಲ ಜಾಜರ’ ಸಂಕೀರ್ತನೆ. ಶೃಂಗಾರ ರಸದಲ್ಲಿ ಮಿಂದಿರುವ ಈ ಸಂಕೀರ್ತನೆ ಹಿಂದೋಳವಸಂತ ರಾಗದಲ್ಲಿದೆ. ಹಿಂದೋಳವೆಂದರೆ ಉಯ್ಯಾಲೆ. ಹಿಂದೋಳವಸಂತಕ್ಕೆ ಎಂಥ ಅರ್ಥವತ್ತಾದ ಹೆಸರು ನೋಡಿ. ರಾಗ ಬೆಳೆಯುವ ಪರಿ ಅನುಭವಿಸಲು, ಕೇಳುಗನು ತೂಗುಯ್ಯಾಲೆಯ ಮೇಲೆಯೇ ಕುಳಿತು ಡೋಲಾಯಮಾನವಾಗಿ ಹಿಂದು ಮುಂದು ತೂಗುವ ಭಾಸವಾಗುವಂತಿದೆ ಇದರ ಸ್ವರ ಸಂಚಾರ. ಗಮಕಗಳ ಮೆರುಗು ಸೇರಿ, ಸ್ವರಪುಂಜಗಳು ಮತ್ತು ಪದಪುಂಜಗಳು ಉಯ್ಯಾಲೆಯಾಡುವ ಸದೃಶ ಸೌಕ್ಯ ಮೂಡುತ್ತದೆ. ವಸಂತ ಮಾಸ ಮತ್ತು ತೂಗುಯಾಲೆ, ಶೃಂಗಾರಕಾಗಿಯೇ ಹೇಳಿಮಾಡಿಸಿದಂತಿದೆ. ಅದರ ಜೊತೆಗೆ ’ಪದಕವಿತ ಪಿತಾಮಹ’ ಅನ್ನಮಾಚಾರ್ಯರ ಪದಲಾಲಿತ್ಯದ ಸರಸ ಸಲ್ಲಾಪ. ’ಭಾವಯಾಮಿ ಗೋಪಾಲಬಾಲಂ’ಯೆಂದು ಭಕ್ತಿ ಸಂಕೀರ್ತನೆ ಸಾರಿದ ಅನ್ನಮಯ್ಯ; ’ಅದಿವೋ ಅಲ್ಲದಿವೋ ಶ್ರೀಹರಿವಾಸಮು’ ಎಂಬ ಕೃತಿಯಲ್ಲಿ ಏಳುಬೆಟ್ಟಗಳನ್ನು ಸಹಸ್ರಾರ, ಮಣಿಪೂರ ಮುಂತಾದ ಏಳುಚಕ್ರಗಳಿಗೆ ಹೋಲಿಸಿ, ಕುಂಡಲೀನಿಯೋಗದ ಮರ್ಮ ತಿಳಿ ಹೇಳಿದ ಆಚಾರ್ಯರು ಕೂಡ. ಹೀಗೆ ಭಕ್ತಿ, ಯೋಗ, ವೈರಾಗ್ಯ ತಿಳಿ ಹೇಳಿದ ಸಂತನು ’ಹೂವು- ಹಾಸಿಗೆ, ಚಂದ್ರ - ಚಂದನ, ಬಾಹುಬಂಧನ-ಚುಂಬನ’ ಗಳ ಬಗ್ಗೆ ವ್ಯಾಖ್ಯಾನ ಮಾಡುವುದೆಂದರೆ ಮೊದಲಿಗೆ ತುಸು ವಿರೋದಾಭಾಸವೆನಿಸುತ್ತದೆ. ’ಜಗಡಪು ಚನವುಲ ಜಾಜರ’ ಸಂಕೀರ್ತನೆಯಲ್ಲಿ ಸಖಿ ಸಖರು ಸರಸದಿಂದ ಸೆಣಸಾಡುವ ಹಬ್ಬದ ವರ್ಣನೆ ನೀಡಿದ್ದಾರೆ. ’ಜಾಜರ’ ಅಂದರೆ ಹೋಲಿಯ ರೀತಿ ಒಂದು ಹಬ್ಬ, ಪರ್ವ. ಸರಸ ಸಲ್ಲಾಪ, ವಿರಹ ವೇದನೆಯ ಭಾವನೆ ಇನ್ನಿತರ ಶೃಂಗಾರ ಪ್ರಧಾನ ಕೃತಿಗಳನ್ನು ರಚಿಸಿ, ಭಕ್ತಿಪ್ರದಾನವಾದ ಕರ್ನಾಟಕ ಸಂಗೀತದ ಚೌಕಟ್ಟಿನಲ್ಲಿ ಶೃಂಗಾರ ಸಂಕೀರ್ತನಗಳನ್ನು ಅನ್ನಮಯ್ಯನವರು ಸುಲಲಿತವಾಗಿ ಅಳವಡಿಸಿಕೊಂಡಿದ್ದಾರೆ.ತಾಳ್ಳಪಾಕಂ ಅಣ್ಣಮಾಚಾರ್ಯವಿರಚಿತ ನಾಲ್ಕು ಸಂಕಲನಗಳು ಲಭ್ಯವಿದೆ: ೧.ಅಧ್ಯಾತ್ಮ ಸಂಕೀರ್ತನಲು ೨. ಶೃಂಗಾರ ಸಂಕೀರ್ತನಲು, ೩ ಶೃಂಗಾರಮಂಜರಿ, ೪.ವೆಂಕಟಾಚಲ ಮಹಾತ್ಮೆ.ಈ ಸಂಕೀರ್ತನೆಯನ್ನು ಅವರ ಶೃಂಗಾರಮಂಜರಿ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.ವೆಂಕಟೇಶಸ್ವಾಮಿಯಲ್ಲಿ ಒಬ್ಬ ತರುಣಿಯ ಅಪರಿಮಿತ ಸತ್ವಪ್ರೇಮ ಮತ್ತು ಆಕೆಯ ಸಖಿಯರ ಮಧ್ಯಸ್ಥಿಕೆ ಇಂದ ಪ್ರೇಮ ಸಫಲವಾಗುವ ಕಥಾವಸ್ಥುವಿನ ಸುತ್ತಾ ಹೊಮ್ಮಿರುವ ಈ ಕೃತಿಯಲ್ಲಿ ವಿಪುಲವಾಗಿ ಶೃಂಗಾರ ಭರಿತ ಕೃತಿಗಳಿವೆ. ಹದಿನಾಲ್ಕನೆ ಶತಮಾನದ ತೆಲುಗಿನ ಅನ್ನಮಯ್ಯನವರು ಇಂತಾದರೆ, ತಮಿಳಿನ ಮಹಾಸಂತರೆನಿಸಿದ ತಿರುವಳ್ಳುವರ್‍ ಅವರೂ ಸಹ ತಮ್ಮ ಮೇರುಕೃತಿಯಾದ ತಿರುಕ್ಕುರಳ್ ನಲ್ಲಿ ಸಖೀ-ಸಖರ ಮಧುರ ಪ್ರೇಮಕ್ಕೆ ಉನ್ನತ ಸ್ಥಾನ ಕೊಟ್ಟಿದ್ದಾರೆ. ೧೩೦೦ ಪಂಕ್ತಿಗಳಿರುವ ಕುರಳ್ ನಲ್ಲಿ ಮೂರುವಿಭಾಗಗಳು: ನೀತಿಬೋದೆಯನ್ನು ಹೇಳುವ ’ಅರಂ’ , ಜೀವನ ಸತ್ಯಗಳನ್ನು ತಿಳಿಸುವ ’ಪೊರುಳ್’, ಸಾಮರಸ್ಯ ಮತ್ತು ಶೃಂಗಾರ ಪ್ರಧಾನ ಭಾಗ - ’ ಇನ್ಬಂ’. ಇತ್ತ ನಮ್ಮ ಕರುನಾಡಿನ ಹಿತ್ತಲಲ್ಲಿನ ಸೂಫಿ ಸಂತ ಶರೀಫರು , ’ಕೋಡಗಾನ ಕೋಳಿ ನುಂಗಿತ್ತಾ?’ ಎಂದು ಮೊದಲುಗೊಂಡು, ’ಗೋವಿಂದಾ ಗುರುವಿನ ಪಾದ ನನ್ನನೆ ನುಂಗಿತ್ತಾ! ಎಂಬ ವೈರಾಗ್ಯದ ನುಡಿಯನ್ನು ಒಂದು ಕಡೆ ಹಾಡಿದರೆ, ಅಷ್ಟೆ ಸಹಜವಾಗಿ, ’ಮೋಹದ ಹೆಂಡತಿ’ ಬಗ್ಗೆಯೂ ಪ್ರೀತಿ-ಅಕ್ಕರೆಯಿಂದ ಸುರತ ಸಂಗೀತ ಪಾಡಿದ್ದಾರೆ. ಇನ್ನು ಸಂಸ್ಕ್ರುತದಲ್ಲಿ ಭರ್ತೃಹರಿಯ ಸುಭಾಶಿತತ್ರಿಶತಿಯಲ್ಲಿಯೂ ನೀತಿ ಶತಕ, ಶೃಂಗಾರ ಶತಕ, ಮತ್ತು ವೈರಾಗ್ಯ ಶತಕಗಳೆಂಬ ಮೂರು ವಿಭಾಗಗಳೇ. ಇಲ್ಲಿ ನಾವು ಗಮನಿಸಬಹುದಾದ ವಿಷಯವೆನೆಂದರೆ -- ಸಂಸ್ಕೃತದಲ್ಲಿ ರಚಿಸಿದ ಭರ್ತೃಹರಿ ಮುನಿಯಾಗಲೀ, ತಮಿಳಿನ ವಳ್ಳುವರ್ ಆಗಲಿ, ತೆಲುಗಿನ ಅನ್ನಮಾಚಾರ್ಯರಾಗಲಿ, ಕನ್ನಡದ ಶಿಶುನಾಳರಾಗಲಿ ಬೇರೆ ಬೇರೆ ದೇಶ-ಕಾಲ-ಭಾಷೆಗಳಲ್ಲಿ ಇದ್ದರಾದರೂ ಎಲ್ಲ ಸಂತರೂ ನೀತಿ, ಶೃಂಗಾರ ಮತ್ತು ವೈರಾಗ್ಯಗಳ್ಳನ್ನೇ ಆಯ್ದುಕೊಂಡು ಬದುಕಿನ ಸಂಪೂರ್ಣತೆಯನ್ನು ಮೆರೆದಿದ್ದಾರೆ. ಚತುರ್ವಿಧ ಪುರುಷಾರ್ಥಗಳಲ್ಲಿ ಧರ್ಮವೇ ಆಗಲಿ, ಅರ್ಥವೇ ಆಗಿಲಿ, ಕಾಮವೇ ಆಗಲಿ, ಯಾವುದೇ ಒಂದು ಸಂಪೂರ್ಣ ಪುರುಷಾರ್ಥವಲ್ಲ. ಹಂತ ಹಂತವಾಗಿ ನೀತಿಯಿಂದ ಧರ್ಮಾರ್ಥಗಳು, ಶೃಂಗಾರದಿಂದ ಧರ್ಮಾವರೋಧವೆನಿಸದ ಕಾಮವು, ಕಾಲಾಂತರದಲ್ಲಿ ವೈರಾಗ್ಯದಿಂದ ಮೋಕ್ಷವೂ ಪ್ರಾಪ್ತಿಯಾಗುವುದಲ್ಲಿಯೇ ಜೀವಿತದ ಸಾರ್ಥಕತೆ!



జగడపు చనువుల జాజర, సగినల మంచపు జాజర

మొల్లలు తురుముల ముడిచిన బరువున, మొల్లపు సరసపు మురిపెమున
జల్లన పుప్పొడి జారగ పతిపై చల్లే పతిపై, చల్లే రతివలు జాజర

భారపు కుచముల పైపై కడు సింగారము నెరపేటి గంధవొడి
చేరువ పతిపై చిందగ పడతులు, సారెకు చల్లేరు జాజర

బింకపు కూటమి పెనగేటి చెమటల, పంకపు పూతల పరిమళము
వేంకటపతిపై వెలదులు నించేరు, సంకుమ దంబుల జాజర



ಬಾಲಕೃಷ್ಣಪ್ರಸಾದ್ ಮತ್ತು ಸಂಗಡಿಗರು | Track details |


*** ಬಾಲಕೃಷ್ಣಪ್ರಸಾದ್ ಮತ್ತು ಸಂಗಡಿಗರು

Sunday, February 24, 2008

ಲೇಸು, ಕೊಳ್ಳದಿರುವುದೇ ಲೇಸು!

ಅಮೆರಿಕೆಯಲ್ಲಿ ಗ್ರಾಹಕರು ವಸ್ತುಗಳನ್ನು ಕೊಳ್ಳುವಾಗ ಅತ್ಯಂತ ಒತ್ತಡಕ್ಕೆ ಒಳಗಾಗಿ ಮನೋವೈದ್ಯರ ಮೊರೆ ಹೊಕ್ಕಿದ್ದಾರಂತೆ!

ಬಹಳ ಹಿಂದೆ ನಾನು ಭಾರತದ ಒಂದು ಪತ್ರಿಕೆಯಲ್ಲಿ ಈ ವಿಷಯ ಓದಿದ ನೆನಪು.ಆಗ ನಾನು,ಇದು ಅತಿಶಯೋಕ್ತಿಯ ಮಾತು ಎಂದು ತಿಳಿದು ಮನದಲ್ಲೆ ನಕ್ಕಿದ್ದುಂಟು.’ಶಾಪಿಂಗ್ ಸ್ಟ್ರೆಸ್ಸ್’ ಕಳೆದು ಕೊಳ್ಳಲು ವೈದ್ಯರ ಬಳಿ ಹೋಗುವುದೆಂದರೇನು? ’ಇಲ್ಲ,ಇಲ್ಲ,ಸಾಧ್ಯವೇ ಇಲ್ಲ!ಇರಲಿಕ್ಕಿಲ್ಲ!’ ಎಂದು ನನ್ನ ಅಂಬೋಣ.ಈ ವಿಷಯ ನನಗೆ ಮನವರಿಕೆಯಾಗಲು,ನಾನು ಸ್ವತಃ ಅಮೆರಿಕೆಗೆ ಬಂದು --ಅಬ್ಬಾ! ಬೇಡವೆನಿಸುವಷ್ಟು ಆಯ್ಕೆಗಳ ಪ್ರವಾಹದಲ್ಲಿ ಸಿಲುಕಿಯೇ ಅರಿಯಬೇಕಾಯಿತು.ಇಲ್ಲಿ ಏನು ಕೊಳ್ಳಬೇಕಾದರೂ ಗ್ರಾಹಕನಿಗೆ ಸಾವಿರಾರು ನಮೂನೆಗಳು ದೊರೆಯುತ್ತವೆ.ಒಂದೇ ಬಗೆಯ ಯಾವುದೇ ಸಾಮಗ್ರಿಯ ಇನ್ನೂರಕ್ಕೂ ಹೆಚ್ಚು ಬಗೆಗಳು ದೊರೆಯುವ ಸ್ಥಳವಿದು.ಒಂದು ವಸ್ತುವಿಗೆ ಐದು ಡಾಲರ್ ಇಂದ ಹಿಡಿದು ಐದು ಸಾವಿರ ಡಾಲರ್ ವರೆಗೂ, ಮನಸ್ಸಿಗೆ ಬಂದ ಯಾವುದಾದರು ಬೆಲೆ ಹಚ್ಚಿ, ದಾಸ್ತಾನು ಮಾಡುವ ಸಾಮರ್ಥ್ಯವಿರುವ ಮಹಾದೇಶವಿದು.ಊಟ-ತಿಂಡಿ,ಬಟ್ಟೆ- ಬರೆ,ಕಾರು-ವಾಹನ ಹೀಗೆ ಎಲ್ಲಾದ್ರಲ್ಲೂ ಗ್ರಾಹಕನ ಗ್ರಹಿಕೆಗೂ ಮೀರಿದಷ್ಟು ವೆರೈಟಿ. ನಾವು ಕೊಂಡದ್ದು ಕಷ್ಟಪಟ್ಟು ಸಂಪಾದಿಸಿದ ಹಣಕ್ಕೆ -- ’ವ್ಯಾಲ್ಯೂ ಫಾರ್ ಮನಿ’ ಯೇ ಎಂಬ ಗೊಂದಲ ಗ್ರಾಹಕನಿಗೆ ಇದ್ದೇ ಇರತ್ತೆ. ಇಷ್ಟೇ ದುಡ್ಡಿಗೆ ಇನ್ನೂ ಹೆಚ್ಚು ಕೊಳ್ಳಬಹುದಿತ್ತೇನೊ, ಇನ್ನೂ ಒಳ್ಳೆಯದು ಖರೀದಿಸ ಬಹುದಿತ್ತೇನೋ ಎಂಬ ಉತ್ತರವಿಲ್ಲದ ಅನಂತ ಆತಂಕ. ನಾವು ಕೊಂಡದ್ದೆಲ್ಲಾ ಅತ್ಯುನ್ನತ ಮಟ್ಟದ್ದೇ ಆಗಿ ತೀರಬೇಕು ಎಂಬ ಮಾನವನ ಹಂಬಲದ ಜೊತೆಗೆ ಆಯ್ದುಕೊಳ್ಳಲು ಬೇಡವೆನಿಸುವಷ್ಟು ವೈವಿಧ್ಯತೆ ಇದ್ದ ಪಕ್ಷದಲ್ಲಿ ಇಂತ ’ಶಾಪಿಂಗ್ ಸ್ತ್ರೆಸ್ಸ್’ ತಲೆದೋರುವುದು ಸಹಜ.

ಅನಂತ ಸಾಧ್ಯತೆಗಳ ಅಮೆರಿಕೆಯಲ್ಲಿ
ಎಲ್ಲವೂ ಗ್ರಾಹಕ ಶಾಹಿ;
ಆಯ್ದುಕೊಳ್ಳಲು ಅರಿಯದೇ ಅಮಾಯಕನಾದರೆ,
ನೆಟ್ಟಕಣ್ಣು-ಬಿಟ್ಟಬಾಯಿ!


ಹಿರಣ್ಯಖಂಡದಲ್ಲಿ ನಾನು ಕಾಲಿಟ್ಟು,ಕಚೇರಿಗೆ ಬಂದಿಳಿದ ಮೊದಲ ದಿನಗಳು. ಬೆಳಗಿನ ನನ್ನ ಕಾಫಿ ಡೋಸ್ ಗಾಗಿ ಕ್ಯಾಫೆಟೀರಿಯಾ ಬಳಿ ಬಂದು ನಿಂತೆ. ಎರಡು ಡಜೆನ್ ಬಗೆಯ ಕಾಫಿ ಆಯ್ಕೆಗಳು: ಐರಿಶ್ ಕಾಫಿ, ಬ್ರೇಕ್ ಫಾಸ್ಟ್ ಸ್ಪೆಷಲ್, ಕೊಲಂಬಿಯಾ ಬ್ಲೆಂಡ್ -- ಹೀಗೆ ಬಗೆ ಬಗೆಯ ಸುಮಾರು ಎರಡು ಡಜನ್ ವೆರೈಟಿಗಳು. ಮೊದಲೇ ಅವಳಿ-ಜವಳಿ ಖ್ಯಾತಿಯ ಮಿಥುನ ರಾಶಿಯಲ್ಲಿ ಹುಟ್ಟಿದ ನನಗೆ, ಎರಡಕ್ಕಿಂತ ಹೆಚ್ಚು ಏನ್ನನ್ನೇ ತೋರಿಸಿ - ’ಆಯ್ದುಕೋ’ ಆಂದರೂ, ಅಲ್ಲೆ ಮಾನಸಿಕ ದ್ವಂದ್ವಗಳು ನಿರ್ಮಿತವಾಗಿ, ಗೊಂದಲ ಮೂಡಿ, ಯಾವುದನ್ನೂ ಆಯ್ದುಕೊಳ್ಳಲಾರದೆ ಬೇಸತ್ತು ಸುಸ್ತಾಗಿಬಿಡುವೆ. ಅಂತಹುದರಲ್ಲಿ ಹೀರಲು ಇಪ್ಪತ್ನಾಲ್ಕು ಬಗೆಯ ಕಾಫಿ ತಳಿಗಳನ್ನು ನನ್ನ ಮೇಲೆ ಹೇರುವುದೇ? ಯಾವುದನ್ನೂ ಕುಡಿಯದೆ,ಸೀದಾ ಡೆಸ್ಕ್ ಬಳಿ ಬಂದು ಕೀಲಿಮಣೆ ಕುಟ್ಟಲು ಆರಂಭಿಸಿದೆ.

ಮಾಸಗಳು ಕಳೆದಂತೆ ತಾಯ್ನಾಡಿನ ನೆನಪುಗಳ ಜೊತೆಗೆ, ನನ್ನ ಲೇಸು ಸಹಾ ತುಸು ಮಾಸ ತೊಡಗಿತು. ಜಯನಗರದ ಬಾಟಾನಲ್ಲಿ ರೂ.೯೯.೯೯ ಬೆಲೆಯ ಸಾದಾ ಚಪ್ಪಲಿಯ ಜೊತೆ ಕೊಂಡ ಕಪ್ಪು ಬಣ್ಣದ ಆಫೀಸ್ ಷೂ ನಂದು.ಪಾದುಕೆ ಸರಿಯಾಗಿ ಬಾಳಿಕೆ ಬಂದರೂ,ಆರು ತಿಂಗಳಲ್ಲಿ ಪಾಪ ಲೇಸು ’ಡಂ’ ಅಂದಿತು.ಲೇಸಿಗೆ ಕನ್ನಡದ ಪಾರಿಭಾಷಿಕ ಶಬ್ದ ತಿಳಿದಿಲ್ಲ.ಸರಿ,’ಪಾದುಕಾ ಬಂಧಕ’ಅನ್ನೋಣ.ಚಿಕ್ಕದಾಗಿ ಮತ್ತು ಚೊಕ್ಕವಾಗಿ ’ಪಾ.ಬ’ -- ಶಾರ್ಟ್ ಅಂಡ್ ಸ್ವೀಟ್! ಕಥೆ ಮುಂದುವರಿಸುತ್ತಾ...ಪಾಪ ನನ್ನ ಪಾ.ಬ. ಕೈ ಕೊಡ್ತಾ....ಆಮೇಲೆ, ಹತ್ತಿರದ ವಾಲ್ ಮಾರ್ಟ್ ಗೆ ಲೇಸಿಲ್ಲದ ದಾಪುಗಾಲಿಟ್ಟು ಕೊಂಡು ನಡೆದೆ. ಕಣ್ಣಿಗೆ ಬಿದ್ದ ಕಪ್ಪು ಪಾ.ಬ. ಕೊಂಡು ಮನೆಗೆ ಹಿಂದಿರುಗಿದೆ.ಮರುದಿನ ಕಚೇರಿಗೆ ತೆರಳುವ ಮುನ್ನ ಪ್ಯಾಕೆಟ್ಟನ್ನು ಬಿಚ್ಚಿ ನೋಡಿದರೆ: ಹನುಮಂತನ ಬಾಲದಂತೆ, ದ್ರೌಪದಿಯ ಸೀರೆಯಂತೆ, ಗೋಲ್ಡನ್ ಸ್ಟಾರ್ ಗಾಳಿಪಟದ ಬಾಲಂಗೋಚಿಯಂತೆ, ಪಾ.ಬ ಮುಗಿಯುತ್ತಲೇ ಇಲ್ಲ. ಸುಮಾರು ಆರೇಳು ಗಜದ ಬೃಹತ್ ಪಾದುಕಾ ಬಂಧಕ ಅದು. ಅಮೆರಿಕೆಯಲ್ಲಿ ಓಡುವುದಕ್ಕೆ ಬೇರೆ ಷೂ; ನಡೆಯುದುದಕ್ಕೆ ಬೇರೆ ಷೂ; ಜಾಗಿಂಗ್ ಗೆ ಬೇರೆ ರೀತಿ ಷೂ, ಬುಟ್ಟಿ ಚಂಡು ( ಬಾಸ್ಕೆಟ್ ಬಾಲ್) ಆಡುವುದಕ್ಕೆ ಬೇರೆ ಷೂ;ಮಾತಾಡಿದವರಿಗೆ ಬೂಟ್ನಲ್ಲಿ ಹೊಡಯಕ್ಕೆ ಬೇರೆ ಷೂ -- ಹೀಗೆ ವಿಧ ವಿಧ ವಾದ ಷೂಗಳ ಮಹಾಪೂರವೇ ಇದೆ. ಷೂಗಳಿಗೆ ತಕ್ಕಂತೆ ಪಾ.ಬ. ಗಳು ಸಹ. ನಾನು ಯಾವುದೊ ಪರ್ವತಾರೋಹಿಗಳಿಗೆ ಮಾಡಿಟ್ಟ ಪಾ.ಬ ತಂದಿದ್ದೆ. ಹೇಳಿ ಕೇಳಿ, ಸುಮಾರು ಐದು ಡಾಲರ್ ಕೊಟ್ಟು ಆ ಲೇಸ್ ಕೊಂಡಿದ್ದೆ. ಲಾಡಿ - ಲೇಸ್ ಗೆಲ್ಲಾ ಇನ್ನೂರು ರೂಪಾಯಿಗಿಂತ ಹೆಚ್ಚು ಕೊಟ್ರೆ ಆ ಭಗವಂತ ಮೆಚ್ತಾನಾ? ಭಗವಂತ ಮೆಚ್ಚಿದರೂ ದುಂದು ವೆಚ್ಚ ಮಾಡಿದೆ ಅಂತ ನಮ್ಮ ಭಾರತದ ಸಮಾಜ ಮೆಚ್ಚುತಾ ಅಂತ,ಇದ್ದ ಲೇಸಲ್ಲಿ ಒಂದನ್ನು ಎರಡು ತುಂಡು ಮಾಡಿ, ಬೇಗ ಬೇಗ ಷೂಗಳಿಗೆ ತೂರಿಸಕ್ಕೆ ಹೋದೆ. ನೈಲಾನ್ ಲೇಸು, ತುದಿಯಲ್ಲಿ ಹರ್ಕೊಂಡು ಎರಡು ತಲೆ ನಾಗರ ಹಾವಿನ ಹಾಗೆ ಬಾಯಿ ಬಿಟ್ಕೊಳ್ತು. ಅಂಗಡೀಗೆ ವಾಪಸ್ ಕೊಡೋಣ ಅಂತ ನೋಡಿದ್ರೆ, ಆಗ್ಲೇ ಸೆನ್ಸಾರ್ ಬೋರ್ಡ್ ಅವರ ಹಾಗೆ ಕತ್ತರಿ ಪ್ರಯೋಗ ನಡೆದಿತ್ತು. ಅಂಗಡಿ ಅವರು ವಾಪಸ್ ತೊಗೊಳೊ ಅವಕಾಶ ಕೊಟ್ರೂ ಸಹಾ, ನನ್ನ ತಪ್ಪಿಗಾಗಿ ಹಿಂದಿರುಗಿಸಿ ಹಣ ಮರಳಿ ಪಡೆಯುವ ಮನಸ್ಸು ಬರಲಿಲ್ಲ.ವಿನಾ ಕಾರಣ ಐದು ಡಾಲರ್ ಕಳೆದು ಕೊಂಡ ಗ್ರಾಹಕನ "ಶಾಪಿಂಗ್ ಸ್ತ್ರೆಸ್ಸ್' ತಲೆದೋರಿತು.ಸಂಜೆ ಮತ್ತೆ ಹೋದೆ ವಾಲ್ ಮಾರ್ಟ್ ಗೆ. ಈ ಬಾರಿ ನಾನು ಪಾಠ ಕಲಿತ ನೊಂದ ಅನುಭವಸ್ತ. ಲೇಸ್ ಕೊಳ್ಳುವ ಮೊದಲು ನಮ್ಮ ಪಾದುಕೆಯಲ್ಲಿ ಎಷ್ಟು ತೂತುಗಳು ಇವೆ ಎಂದು ನೋಡಿ, ಕೂಲಂಕಶವಾಗಿ ವಿಚಾರಿಸಿ ವಿಷ್ಲೇಶಿಸಿ, ಅದಕ್ಕೆ ಅನುಗುಣವಾಗಿ ಪಾ.ಬ. ಕೊಳ್ಳಬೇಕಂತೆ. "ಅಯ್ಯೋ ರಾಮ! ಏನಪ್ಪ ಇದು? ಲೇಸ್ ಕೊಳ್ಳದಕ್ಕೆ ಇಷ್ಟು ಸಾಮಾನ್ಯ ಙ್ನಾನ ಇರಬೇಕೆ?" ಅಂದು ದೇವರನ್ನು ಕೇಳಿದರೆ; ರಾಮನಿಗೇನು ಗೊತ್ತು ಪಾದುಕಾ ಬಂಧಕದ ವಿಚಾರ? ಭರತ ಅದನ್ನೂ ಹೊಡ್ಕೊಂಡು ಹೋಗಿಬಿಟ್ಟಿದ್ನಂತೆ ಆಶ್ರಮಕ್ಕೆ ಬಂದಾಗ!

ರಾಮಾಯಣದ ವಿಷಯ ಹಾಗಿರ್ಲಿ, ಲೇಸು ಕೊಳ್ಳುವ ಬಗ್ಗೆ ನಮ್ಮ ಸಮಗ್ರ ಅರಿವು ಹೆಚ್ಚಿಸಿ ಕೊಳ್ಳೋಣ ಈಗ:

ಷೂವಿನಲ್ಲಿ ಮೂರರಿಂದ ನಾಲ್ಕು ಕಣ್ಣುಗಳಿದ್ದರೆ (ಐಲೆಟ್ಸ್) ೬೯ ಸೆ.ಮೀ. ಲೇಸು ಕೊಳ್ಳಬೇಕು; ಐದರಿಂದ ಆರು ಕಣ್ಣುಗಳ್ಳಿದರೆ ೯೧ ಸೆ.ಮೀ. ಲೇಸು, ಏಳರಿಂದ ಎಂಟು ಕಣ್ಣುಗಳಿದ್ದರೆ ೧೧೪ ಸೆ.ಮೀ. ಲೇಸು. ಲೇಸು ಕೊಳ್ಳುವ ಮೊದಲು ಕನಿಷ್ಠ ಇಷ್ಟು ಮಾಹಿತಿ ನಮಲ್ಲಿರಬೇಕು. ಪಾ.ಬ. ಕೊಳ್ಳುವಲ್ಲಿಯೂ ಪಾದುಕೆಯ ಮೇಲಿರುವ ಕಣ್ಣುಗಳ ಮೇಲೆ ಕಣ್ಣಿಟ್ಟು, ಗಮನಕೊಟ್ಟು ಕೊಳ್ಳಬೇಕೆಂಬ ದೃಷ್ಟಾಂತ ಕಂಡುಕೊಂಡ ಕರಾಳ ದಿನ ಅದು. ನಿರಾಳವಾಗಿ ಯಃಕಶ್ಚಿತ್ ಒಂದು ಲೇಸ್ ಕೊಳ್ಳೋದಕ್ಕೂ ಇಷ್ಟು ತಿಳ್ಕೋ ಬೇಕಾದ್ರೆ;ಅಪ್ಪಾ ದೇವ್ರೇ,’ಲೇಸು, ಕೊಳ್ಳದಿರುವುದೇ ಲೇಸು!’

Thursday, February 14, 2008

ಹೃದಯ ಹೃದಯ ಮಿಲನ ದೊಳು


* ಮಧುರ ನಯನ ಮಧುರ ವಚನ ಮಧುರ ಹಸನ - ಮಧುರಾಧಿಪತಿ
===
ಇಂದು ವ್ಯಾಲೆಂಟೈನ್ಸ್ ಡೇ. ಈ ದಿನ ನಾನು ಪದೆ ಪದೆ ಗುನುಗುತಿರುವುದು ಪು.ತಿ.ನ. ಅವರ ಈ ದೈವೀಕವಾದ ರಚನೆ : "ಹೃದಯ ಹೃದಯ ಮಿಲನ ದೊಳು".ನಮ್ಮೆಲ್ಲರ ಇರುವಿನ ನಡುವೆ ಇರುವ ಇರುಳ ಛಾಯೆಯನ್ನು ನೀಗುವ ತಮೋಘ್ನಕಾರಕ - ಈ ಪ್ರೀತಿ ಎಂದಿದ್ದಾರೆ . ಆಹಾ! ಎಂಥಾ ಅಮೋಘ ಭಾವನೆ! ಮಧುರ ಅನುಭಾವಗಳ,ಅನುಭವಗಳ ಮೂಡಿಸುವ ಪ್ರೇಮ, ಜೀವನ್ಮುಖಿಗಳಾಗಲು ಚಿಲುಮೆಯಾಗಿ, ನವೋತ್ಸಾಹವಾಗಿ, ಸತ್ವ ಪ್ರೇರಕವಾಗಿ,"ಮನದರ್ತಿಯ ಪ್ರೇರಣೆ" ಎಂದೆನಿಸುತ್ತದೆ.ಪ್ರೇಮವು ಚೇತನವನ್ನು ಹಸನು ಮಾಡುವ ಕ್ರಿಯೆಯೆಂಬ ಅಧ್ಯಾತ್ಮದ ಮೆರುಗು ಈ ರಚನೆಯಲ್ಲಿದೆ. ನಿಜಕ್ಕೂ ಇದನ್ನು ಬರೆದ ನರಸಿಂಹಾಚಾರ್ಯರೇ ಧನ್ಯರು,ಆಲಿಸಿದ ನಾವೇ ಧನ್ಯರು! ಇಡೀ ಹಾಡು ವಿಜೃಂಭಣೆಯಿಂದ ರಾರಾಜಿಸುತ್ತದೆ. ಸಾಹಿತ್ಯದಷ್ಟೆ ಸೊಗಸಾಗಿ ಸಂಗೀತವನ್ನು ಸ್ವರಬದ್ಧ ಗೊಳಿಸಿದ್ದಾರೆ ಸಿ.ಅಶ್ವಥ್ ಅವರು.

===
ಸಂಕಲನ: ಭಾವ ಬಿಂದು
ಸಾಹಿತ್ಯ: ಪು.ತಿ.ನ.
ಸಂಗೀತ: ಸಿ. ಅಶ್ವಥ್
ಗಾಯನ: ಹೆಚ್. ಕೆ. ನಾರಾಯಣ್ ಮತ್ತು ಎಂ.ಎಸ್.ಶೀಲ
===
ಹೃದಯ ಹೃದಯ ಮಿಲನ ದೊಳಗೆ ಮಧುರವಹುದು ಧಾತ್ರಿ
ಮಧುರ ನಯನ ಮಧುರ ವಚನ ಮಧುರ ಹಸನ ಮೈತ್ರಿ

ಇರವಿರವಿನ ನಡುವಣಿರುಳ ಪರಿಹಸುವ ಸರ್ವಳಿ
ಅರಿವರ್ಥವ ದಮಿಸುವೂರ್ಜೆ ನರಗೊಲುಮೆಯ ಬಳುವಳಿ

ಇನಿಯರೊಸಗೆ ಮೊಗದೊಳೆಸೆವ ತನಿಯಕಾಂತಿ ಏನೆಳೆ
ಅನುಕರಿಸುವ ಪರ್ವೋತ್ಸವ ಮನದರ್ತಿಯ ಪ್ರೇರಣೆ

ಹೃದಯ ಹೃದಯ ಮಿಡಿಳಿವಾಗೆ ಮಧುರವಹುದು ಚೇತನ
ಮಧುರೇಕ್ಷಣ ಮಧುರವಾಣಿ ಮಧುರಸ್ಮಿತ ನೂತನ.
===

ಇಲ್ಲಿ ಕೇಳಿ ಆನಂದಿಸಿ :

http://www.kannadaaudio.com/Songs/Bhaavageethe//BhaavaLahari/HrudayaHrudayaMilanadolu.ram

===

Tuesday, February 12, 2008

ಗಾಳಿಯಲ್ಲಿ ಧಾಳಿ



ಹರಿತವಾದ ಖಡ್ಗ.
ಚೂಪಾದ ತುದಿ.
ಕುಶಾಗ್ರ ಲೋಹ.
ವೀರಾವೇಶದಿಂದ ಹಾಗೊಮ್ಮೆ ಹೀಗೊಮ್ಮೆ ಸರಕ್ಕನೆ ತೂರಾಡಿಸಿ ಬೀಸುತ್ತಿರುವೆ.
ಇದೋ ವೀರಾವೇಷ ತ್ವರಿತವಾಗುತ್ತಿದೆ.
ಅಬ್ಬಬ್ಬಾ ! ಎಂಥಾ ರಭಸ!

ಸುತ್ತ ಹಬ್ಬಿದ ಸ್ತಬ್ಧಗಾಳಿಯ ಸೀಳಿ,
ಇಬ್ಬಾಗಗಳ ಮಾಡುತ
ಅನಂತ ದ್ವಂದ್ವಗಳ ರೇಖೆಗಳ
ಕ್ಷಣಕ್ಕೆರಡಂತೆ ರಚಿಸಿ ಅಳಿಸುತ್ತಿದೆ.
ಗಾಳಿಯಲ್ಲಿಯೇ.

ದಿನವಿಡೀ ನಡೆದ ಎದುರಾಳಿಯೇ ಇಲ್ಲದ ಪ್ರಚಂಡ ಕಾಳಗ.
ಸುಸ್ತಾಯಿತು. ಸೂರ್ಯಾಸ್ತವಾಯಿತು.
ಇನ್ನು ಗುಡಾರ ಸೇರಿ ದಿನದ ಪೆಟ್ಟು ಗಾಯಗಳಿಗೆ ಮುಲಾಮು ಹಚ್ಚುವ ಸಮಯ.
ಸರಸರನೆ ನಡೆಯ ಬೇಕು.
ನಾಳೆ ರಣಕಹಳೆ ಅರ್ಧತಾಸು ಮುಂಚೆಯೇ ಮೊಳಗಲಿದೆಯಂತೆ.
==

miami lakes, FL. 12-Feb-2008 11:30 PM

Friday, February 08, 2008

ನಕ್ಷೆ - ನಿಲುವು



ಬಹಳ ದೂರ ಬಂದಿದ್ದೇವೆ ಗೆಳೆಯ.....ಬಹಳ ದೂರ.
ಹುಡುಕಿ ಹೊರಟ ತಾಣಕ್ಕೂ
ನಮ್ಮ ಈಗಿನ ಸ್ಥಾನಕ್ಕೂ
ಒಂದೇ ರೇಖೆ ಅಂತರ:
ಎಂಭತ್ತು ಮತ್ತು ನೂರರ ವ್ಯತ್ಯಯ!

ಮೂಲೆಗೆ ಸರಿದ ಮುಂಜಾವಿನ ಮೂಲಗುರಿ
ಮಾಯಾಜಿಂಕೆಯ ಮಾರಿ-
ಚ ಲನಶೀಲ ನಕ್ಷೆ-ನಿಲುವು;

ಅಳಿವ ಸ್ಥಾವರದ ಇಳಿ
-ಜಾರಿನ ಹಳಿಯ ಬಳಿ
ದಿಕ್ಕು - ದೆಸೆ ಬದಲಿಸಿ,
ಜಂಗಮದ ಜಾರೆಬಂಡೆಯ ಮೇಲೆ
ಜುರ್ !!! ...ರ್ !!!...ರ್ !!!.... ಎಂದು ಜಾರಿ ಬಂದ
ಬಿರಾಗಿ,
ಸಿಕ್ಕ ತಾಣವೇ ಸ್ವರ್ಗದಂತಿರಲು
ಸಿಗದ ಸೋಜಿಗದ ಪರಿವೆ ಇನ್ನೇಕೆ ?

ನಡೆಯುತಲೆ ನಾವು ಸಿಗಿದ ದಾರಿಯಲ್ಲಿನ ಸೀಳು,
ಹಿಡಿದ ಹಾದಿ, ಇಟ್ಟ ಹೆಜ್ಜೆ
ದೂರ ಸರಿದೂ ಸರಿದೂ
ಈಗ ಇಲ್ಲೆಲ್ಲೋ ತಂದಿರಿಸಿದೆ.

ಈಗ, ’ಇದು’ "ಇಲ್ಲೆಲ್ಲೋ" ಎಂದೆನಿಸಿದರೂ - ಆಪ್ತ,
ಮಾರ್ಗ ಮಧ್ಯೆ (ನಾವು) ಗೆದ್ದ ಅಧ್ಯಾಸದ ದಾಸ್ಯ
ಪಡೆದ ಸತ್ಯ ಸಾಕ್ಷಾತ್ಕಾರ, ನೂತನ ದೃಷ್ಟಿ
ಕೋನ
ಜೀವಿತದಷ್ಟೆ ಸಹಜ,
ಭಾವದಷ್ಟೆ ನೈಜ,
ಸಾಕ್ಷಿಯಷ್ಟೆ ಸತ್ಯ !

ಇಂತಿರಲು ನಾವು ನಿಜಕ್ಕೂ
ಬಹಳ ದೂರ ಬಂದೆವಾ ಗೆಳೆಯ.....ಬಹಳ ದೂರ?

==

Miami Lakes, FL 01Feb2008 2:49 PM

Monday, January 28, 2008

ಗಹನ ಗಾಂಧಾರ




ಗುನುಗು - ೧
---
ಪ್ರಿಯೆ ನನ್ನ ಪ್ರೇಮದ ರಂಗು ಸ್ವರ್ಣ ಸಿಂಧೂರ
ಎದೆಯೊಳಗೆ ಗುನುಗಿದ ಗುಂಗು ಗಹನ ಗಾಂಧಾರ
ಮಿನುಗುತಿಹ ಕಂಗಳ ಮಿಂಚು ಮೇಘ ಮಂದಾರ
ಮೌನದಲೆ ಸೆಳೆಯುವ ಸಂಚು ಮದನ ಶೃಂಗಾರ
---

ಚುಟುಕ - ೧

ದೂರವಿರಿಸಲು ನಮ್ಮನು ಸೆಣೆಸುತಿವೆ ಕೇತು ಮತ್ತು ರಾಹು
ಚಿಂತಿಸದಿರು ನಲ್ಲೆ, ನಮ್ಮಲ್ಲಿದೆ ಜೀಟಾಕು ಜೋತೆಗೆ ಯಾಹೂ
---

ಚುಟುಕ - ೨
ಮಿಡಿವ ಹೃದಯಗಳಿಗೆಲ್ಲಿದೆ ಮುಖಾಮುಖಿ ಸಂಧಿಸುವ ಹಂಗು
ನಾ ಮುಗುಳು ನಗಲು ಸಾಲದೆ ಪ್ರಿಯೇ, ನಿನ ಚ್ಯಾಟಿನಾ ಪಿಂಗು
---

Thursday, January 24, 2008

ಪರಕಾಯಪ್ರವೇಷ(ಶ)




ನೆನೆಸಿದೆಲ್ಲ ನನಸಾಗುತ್ತಿದ್ದರೆ ಏನೋ ಒಂದು ರೀತಿ ಮುಜುಗರ. ಅಸಹನೆ. ಆತಂಕ.ಇದು ನನ್ನ ಜೀವಿತವಲ್ಲವೇನೋ ಎಂಬ ಶಂಖೆ. ದುಃಖಕ್ಕೆ ಒಗ್ಗಿದ ಜೀವ, ಒಮ್ಮೆಲೆ ಹಿಗ್ಗಿದರೆ ಕುಗ್ಗುವುದಿಲ್ಲವೆ? ಎಂದಿನಂತೆ ಹತಾಷೆಯೇ ಲೇಸು.ಕನೀಸ ಸಹಜವೆನಿಸುತ್ತದೆ.ಹೌದು, ಇದು ನನ್ನದೇ ಬದುಕು ಅನಿಸುತ್ತದೆ.ಎಲ್ಲವೂ ಸುಗಮವಾಗಿ ಸಾಗಿದರೆ ನನ್ನ ದೇಹತ್ಯಜಿಸಿ ಯಾರದೋ ಪರಕಾಯಪ್ರವೇಶ ಮಾಡಿದಂತೆ ಭಾಸ.ಅಬ್ಬಾ .... !!! ಎಂಥಾ ಪರಕೀಯ ಭಾವ - ಈ ಸಂತಸ!

Miami Lakes,FL - Night of Jan 23 2008.

Sunday, January 20, 2008

ಭೃಹದಾರಣ್ಯಕ

* ====================================
ಙ್ಞಾನ ಕಾನನದ ಒಳಹೊಕ್ಕು ಕಂಡದ್ದಿಷ್ಟೆ:
ಬಹುಶಾಖಾ 'ಭೃಹದಾರಣ್ಯಕ' !
ದಿನಕರನ ನಿಜಕಿರಣದ
ಎಳೆ - ಎಸಳೂ ನುಸುಳದಂತೆ
ಮುಗಿಲ್ಕವಿದು ಹಬ್ಬಿದ
ಅಹಂಮ್ಮಿನ ದಟ್ಟ ಹಂದರದಡಿ,
ಛಂದೊಬದ್ಧ ವಾಕ್ಪಟಿತ್ವದ
ಪುಶ್ಪಸಮಾನ ಪದಪುಂಜಗಳಲ್ಲಿ
ಸುಸದ್ದಿದ್ದುದು
ಒಂದೇ ಏನೋ - ಸತ್ಯ ವನಸುಮ !

ವಾದ ಪ್ರತಿವಾದಗಳ
ಚಕ್ರತೀರ್ಥದೆ ಒಳಸಿಲುಕಿ
ಅನಿರ್ಣಯದೆ ವಕ್ರವೆನಿಸಿದ್ದು,
ತಿರುವಿ ನಿಂದ ಪ್ರಶ್ನಾರ್ಥಕ.

ತನ್ನಿಲುವ ನಿರೂಪಿಸಲು ಪರನ್ಯೂನ ಸಾರುವ
ವಿದ್ವನ್ಮಿಣಿಗಳ ಬಾಹ್ಯ ಭಾಷ್ಯಗಳ
ಪರಿಮಿತಿಗೆ ನಿಲುಕದಿದ್ದಲ್ಲವೆ
ಆ ನಿಶ್ಚಲ ಬ್ರಹ್ಮ?
ಷುಷ್ಕ ಪಾರಿಭಾಶಿಕಗಳ
ಬಂಧಿಯಾಗ ಬಲ್ಲನೇ ಆ ಪರಮಾತ್ಮ?

ಅರಿವಿನ ಅಡಿಸೇರಿಗೆ
ಆ ಅಗೋಚರನ ಅಡಕವಾಗಿರಿಸದೆ,
ತಿಳಿವ ಹಂಬಲಕೆ ತಿಳತರ್ಪಣವನೆಸಗಿ,
ಅರ್ಪಿಸಿ ಅಡಿಗಡಿಗೆ ಮನವ ತಿಳಿಯಾಗಿಸಿ
ಮುದದೆ ಮೋಕ್ಷ ಸಾಧಿಸಲು
ಮಿಂದರಾಗದೆ ಭಕ್ತಿಬಿಂದುವಿನಲಿ?

=====================================

Miami Lakes,FL night of Jan 18 2008 thru Jan 19 2008.
* ಚಿತ್ರ ಕೃಪೆ : ಶ್ರೀಕಾಂತ್ ಬೇಡತೂರು