Saturday, April 11, 2020

ವಾಕ್ಯಕೋವಿದ ಹನುಮಂತ

ಮಹಾಕವಿ ವಾಲ್ಮೀಕಿ ಮಹರ್ಷಿಗಳ ಕಾವ್ಯರಚನಾ ನೈಪುಣ್ಯ ಸರ್ವವಿದಿತವೇ ಆಗಿದೆ.  ಮಹರ್ಷಿಗಳ ಋಷಿದರ್ಶನ ಹಾಗೂ ಕಾಣ್ಕೆಗಳು ಮಹಾಕಾವ್ಯದ ಉದ್ದಗಲಕ್ಕೂ ಶೋಭಿಸುತ್ತವೆ. ರಾಮಾಯಣದ ಪಾತ್ರಪ್ರಪಂಚವೂ ನಿತ್ಯನೂತನವಾಗಿವೆ. ಶ್ರೀಮದ್ರಾಮಾಯಣದಲ್ಲಿ ಪಾತ್ರ ಪರಿಚಯವನ್ನೇ ನೋಡೋಣ. ಸ್ವಾರಸ್ಯವೂ, ಔಚಿತ್ಯಪೂರ್ಣವೂ ಆಗಿರುವ ಪಾತ್ರಪರಿಚಯ ಕಾವ್ಯ ರೀತ್ಯ ಅನುಕರಣೀಯವಾಗಿದೆ. ಕಿಷ್ಕಿಂಧಾಕಾಂಡದಲ್ಲಿ ಆಂಜನೇಯ ಸ್ವಾಮಿಯ ಪರಿಚಯದ ಸನ್ನಿವೇಶವನ್ನೇ ಗಮನಿಸೋಣ.

ಕಿಷ್ಕಿಂಧಾಕಾಂಡದಲ್ಲಿ ಮೊದಲಿಗೆ ಆಂಜನೇಯ ಸ್ವಾಮಿಯ ಸಾಕ್ಷಾತ್ಕಾರ ವಾಲ್ಮೀಕಿ ರಾಮಾಯಣದಲ್ಲಾಗುತ್ತದೆ. ಶ್ರೀ ರಾಮ ಮತ್ತು ಲಕ್ಷ್ಮಣರು ಋಷ್ಯಮೂಕ ಪರ್ವತದ ಕಡೆಗೆ ಧಾವಿಸುತ್ತಿರುತ್ತಾರೆ. ಬೆಟ್ಟದ ಮೇಲಿನಿಂದ ನೋಡಿದ ಸುಗ್ರೀವ ಮುಂತಾದ ಕಪಿನಾಯಕರು ಅವರು ಯಾರೆಂಬುದು ಅರಿಯದೆ, ಮಹಾವೀರರಂತೆ ಕಾಣುವ ಈ ಇಬ್ಬರು ರಾಜಕುಮಾರರು ವಾಲಿಯ ಕಡೆಯ ಗೂಢಚಾರರೇನೋ ಎಂಬ ಭೀತಿಗೆ ಒಳಗಾಗುತ್ತಾರೆ. ಆಗ ಸುಗ್ರೀವನು ತನ್ನ ಸಚಿವನಾದ ಮಾರುತಿಯನ್ನು ಪರಿಚಯಿಸುತ್ತಾ ವಾಲ್ಮೀಕಿ ಮಹರ್ಷಿಗಳು ಹೀಗೆಂದಿದ್ದಾರೆ:  "ಉವಾಚ ಹನುಮಾನ್ ವಾಕ್ಯಂ ಸುಗ್ರೀವಂ ವಾಕ್ಯಕೋವಿದಃ" (4.2.13). ಮೊದಲಬಾರಿಗೆ ಹನುಮಂತನನ್ನು ವಾಲ್ಮೀಕಿ ಮಹರ್ಷಿಗಳು ಪರಿಚಯಿಸುವಾಗ 'ವಾಕ್ಯಕೋವಿದಃ' ಎಂದಿದ್ದಾರೆ. ಹೌದು, ಮಾರುತಿಯು ವಾಕ್ಯಕೋವಿದನೇ, ನವ ವ್ಯಾಕರಣ ಪಂಡಿತನೇ!

ವಾಲ್ಮೀಕಿ ರಾಮಾಯಣದಲ್ಲಿ ಹನುಮಂತನು ಮೊದಲ ಬಾರಿಗೆ ನುಡಿವ ವಚನವೂ ಸಹ ಸ್ವಾರಸ್ಯಪೂರ್ಣವಾಗಿದೆ. ಮಾರುತಿಯು ಸುಗ್ರೀವನನ್ನು ಉದ್ದೇಶಿಸಿ ಹೀಗೆನ್ನುತ್ತಾನೆ: "ಸಂಭ್ರಮಸ್ತ್ಯಜ್ಯತಾಂ" -- "ಈ ಭ್ರಮೆಯನ್ನು ತ್ಯಜಿಸು". ಈ ಅಭಯವಚನವನ್ನು ಭಕ್ತಾಭಯಪ್ರದಾಯಕನಾದ ಮಾರುತಿಯು ಮೊದಲಿಗೆ ನುಡಿಯುತ್ತಾನೆ: "ಈ ರಾಜಕುಮಾರರು ವಾಲಿಯ ಕಡೆಯವರು ಎಂಬ ಭ್ರಮೆಯನ್ನು ತ್ಯಜಿಸು, ವಾನರ ವೀರನೇ!" ಎಂಬುದು ಇದರ ತಾತ್ಪರ್ಯ. ನಾವು ಸೂಕ್ಷ್ಮವಾಗಿ ಗಮನಿಸಿದರೆ ಶ್ರೀಮದ್ಭಗವದ್ಗೀತೆಯಲ್ಲಿ ಯೋಗೇಶ್ವರ ಶ್ರೀ ಕೃಷ್ಣನು ಮೊದಲು ನುಡಿಯುವುದು  ಇದೇ ಮಾರ್ಮಿಕವಾದ ಮಾತನ್ನೇ -- "ಅಶೋಚ್ಯಾನ್ ಅನ್ವಶೋಚ್ಯಸ್ತ್ವಂ!"  ಗೀತೆಯಲ್ಲಿಯೂ ಸಹ ಭಗವಂತನ ಮೊದಲ ನುಡಿ ಭ್ರಮೆಯನ್ನು, ಮೋಹವನ್ನು ತ್ಯಜಿಸುವುದರ ಕುರಿತಾಗಿ. ಹೀಗೆ ಔಚಿತ್ಯಪ್ರಜ್ಞೆಯನ್ನು ಸದಾಕಾಲ ಮೆರೆಸುವ ಹನುಮಂತ ವಾಕ್ಯಕೋವಿದ. ಎಷ್ಟೇ ಆದರೂ, "ಬುದ್ಧಿಮತಾಂ ವರಿಷ್ಠಂ" ಅಲ್ಲವೇ!

ಮಾರುತಿಯ ವಾಕ್ಯಚಮತ್ಕಾರ ಇನ್ನೂ ಬಹಳಷ್ಟು ಸನ್ನಿವೇಶಗಳಲ್ಲಿ ಅಡಕವಾಗಿವೆ. ಲಂಕೆಯಲ್ಲಿ ಸೀತಾಮಾತೆಯನ್ನು ಕಂಡು ಮತ್ತೆ ಕಿಷ್ಕಿಂಧೆಗೆ ಹಿಂದಿರುಗಿ ಕುಶಲವಾರ್ತೆಯನ್ನು ತಿಳಿಸುವ ಸಂದರ್ಭ. ಆಂಜನೇಯನು "ದೃಷ್ಟಾ ಸೀತಾ" ಎಂದು ನುಡಿಯುತ್ತಾನೆ. ಅದೇ ನುಡಿಯನ್ನು "ಸೀತಾ ದೃಷ್ಟಾ" ಎಂದು ಸಹ ಹೇಳಬಹುದಿತ್ತು. ಆದರೆ ತನ್ನ ಸ್ವಾಮಿ ಶ್ರೀರಾಮನಿಗೆ "ದೃಷ್ಟಾ" - "ಕಂಡೆನು" ಎಂಬ ಮಾತು ಕೇಳಿದ ಕೂಡಲೇ ಶಾಂತಿ ಸಮಾಧಾನ ದೊರೆಯುವುದು ಎಂದು ತಿಳಿದು, ಒಂದು ಕ್ಷಣವೂ ವ್ಯಯಿಸದೆ ಮೊದಲು "ದೃಷ್ಟಾ" ಎಂದು ನುಡಿಯುತ್ತಾನೆ ವಾಕ್ಯಕೋವಿದ ಆಂಜನೇಯ. "ಸೀತಾ ದೃಷ್ಟಾ" ಎಂದಿದ್ದರೆ, ಶ್ರೀರಾಮನು "ಸೀತೆಯು ಕಂಡಳೋ, ಕಾಣಲಿಲ್ಲವೋ?" ಎಂಬ ತಲ್ಲಣಕ್ಕೆ ಕ್ಷಣಕಾಲ ತುತ್ತಾಗಬಾರದು ಎಂದು ಯೋಚಿಸಿ "ದೃಷ್ಟಾ ಸೀತಾ" ಎಂದು ಘೋಷಿಸುತ್ತಾನೆ ಈ ವಾಕ್ಯಕೋವಿದ, ಮಹಾ ರಾಮಭಕ್ತ ಹಾಗೂ ಸಮಯ ಸ್ಫೂರ್ತಿಯ ನಿಧಿ ಮಾರುತಿರಾಯ.

ಯುದ್ಧಕಾಂಡದಲ್ಲಿ ವಿಭೀಷಣನು ಶ್ರೀರಾಮನಲ್ಲಿ ಶರಣಾಗತಿಯನ್ನು ಕೋರಿ ಬಂದಾಗ ವಾನರವೀರರೆಲ್ಲ ಶ್ರೀರಾಮನೊಂದಿಗೆ ಸಮಾಲೋಚನೆ ನಡೆಸುತ್ತಾರೆ. ಆಗ ವಾಲ್ಮೀಕಿ ಮಹರ್ಷಿಯು ಹನುಮಂತನನ್ನು ಕುರಿತು ನುಡಿಯುವ ಶ್ಲೋಕ ಮಾರುತಿಯ ಗುಣಕ್ಕೆ ಹಿಡಿದ ಕೈಗನ್ನಡಿ.

"ಅಥ ಸಂಸ್ಕಾರಂ ಸಂಪನ್ನೋ ಹನುಮಾನ್ ಸಚಿವೋತ್ತಮಃ ।
ಉವಾಚ ವಚನಂ ಸ ಲಕ್ಷಣಂ ಅರ್ಥವಾನ್ಮಧುರಂ ಲಘು" ।। (೬. ೧೭. ೫೦)

ಸಂಸ್ಕಾರಯುಕ್ತ ಸಚಿವೋತ್ತಮನಾದ ಹನುಮಂತನ ವಚನವು ಸದಾಕಾಲ ಅರ್ಥವತ್ತಾಗಿ, ಮಧುರವಾಗಿ ಹಾಗೂ ಲಘುವಾಗುರುತ್ತವೆ. ನಮ್ಮ ಪಾಲಿಗೆ ಇವೆಲ್ಲವೂ ಅನುಕರಣೀಯ ಗುಣಗಳೇ! ಮಾತುಗಳು ಸದಾಕಾಲ ಅರ್ಥಗರ್ಭಿತವೂ, ಲಘುವು, ಮಧುರವೂ ಆಗಿರಬೇಕು - ಶ್ರೀರಾಮದೂತ ಹನುಮಂತನ ಹಾಗೆ.

।। ಜೈ ಶ್ರೀರಾಮ ।। ।। ಜೈ ಬಜರಂಗ ಬಲಿ।।

#Ramayana ; #MotivationQuotes 

No comments: