Sunday, September 26, 2010

ರಾಶೊಮಾನ್ ಮತ್ತಿತರ ಕಥೆಗಳು




ನ್ಯಾಯಾಧೀಶರು ಮರಕಡಿಯುವವನನ್ನು ಪ್ರಶ್ನಿಸಿದಾಗ ಕೊಟ್ಟ ಹೇಳಿಕೆ:

ಹೌದು ಮಹಾಸ್ವಾಮಿ. ಖಂಡಿತವಾಗಿಯೂ ನಾನೆ ಮೃತದೇಹವನ್ನು ನೋಡಿದ್ದು. ಬೆಳಗಿನ ಸಮಯ ಎಂದಿನಂತೆ ಮರಕಡಿಯಲು ಹೋದಾಗ ಮೃತದೇಹವನ್ನು ಆ ಗಿರಿ ಕಂದರದ ತೊಪ್ಪಲ್ಲಲ್ಲಿ, ಒಂದು ಪೊದೆಯಲ್ಲಿ ನೋಡಿದೆ. ಸ್ಥಳ ಅಂತೀರಾ? ಯಾಮಶಿನ ರಸ್ತೆಯಿಂದ ಸುಮಾರು ೧೫೦ ಅಂಗುಲ ದೂರವಿದ್ದಿರಬಹುದು. ದಾರಿಗೆ ತುಸು ಪಕ್ಕದಲ್ಲಿನ ಬಿದಿರು ಪೊದೆ ಅದು.

ಹೆಣವು ನೀಲಿ ನಿಲುವಂಗಿ ಕಿಮೋನೊ ಮತ್ತು ಕ್ಯೋಟೊ ಶೈಲಿಯ ಮುದುರಿದ ತೋಪಿಯನ್ನುಟ್ಟು ಅಂಗಾತ ಮಲಗಿತ್ತು. ಒಂದೇ ಕತ್ತಿಯ ಸೀಳು ಎದೆಯನ್ನು ಸೀಳಿ ಘಾತಿಸಿತ್ತು. ಅತ್ತಿತ್ತ ಬಿದ್ದಿದ್ದ ಬಿದುರಿನ ತರುಗೆಲೆಗಳು ರಕ್ತಸಿಕ್ತವಾಗಿ ಕೆಂಪನೆ ಹುವಾಡಿಸಿತ್ತು. ಇಲ್ಲ, ರಕ್ತ ಇನ್ನು ಸುರಿಯುತ್ತಿರಲಿಲ್ಲ. ಗಾಯ ಆರಿದ್ದಿರಬೇಕು. ನಾನು ಬಂದದ್ದನು ಗಮನಿಸದೆ ನೊಣ ಒಂದು ಅಲ್ಲೆ ಅಂಟಿ ಕುಳಿತಿತ್ತು. ಅಲ್ಲಿ ಖಡ್ಗ ಇತ್ಯಾದಿ ಎನಾದ್ರು ಇತ್ತು ಅಂತೀರ? ಎಲ್ಲಿ ಆ ರೀತಿ ಯಾವುದೂ ಇರಲಿಲ್ಲ. ಇಲ್ಲ ಮತ್ತಿನ್ನೇನು ಇರಲಿಲ್ಲ ಮಹಾಸ್ವಾಮಿ. ಅಲ್ಲಿ ಮರದ ಬುಡದಲ್ಲಿ ಒಂದು ಹಗ್ಗವನ್ನು ಮಾತ್ರ ಗಮನಿಸಿದೆ. ಮತ್ತೆ.... ಹಗ್ಗದವನ್ನು ಬಿಟ್ಟರೆ ಅಲ್ಲಿ ಒಂದು ಬಾಚಣಿಗೆ ನೋಡಿದೆ. ಅಷ್ಟೆ ಅಲ್ಲಿದ್ದದ್ದು. ಬಹುಶಃ ಕೊಲೆಯಾಗುವಿದಕ್ಕೆ ಮುಂಚೆ ಹೊರಾಡಿ ಒದ್ದಾಡಿರ ಬೇಕು, ಯಾಕೆಂದ್ರೆ ಅಲ್ಲಿದ್ದ ಗರಿಕೆ-ಹುಲ್ಲುಗಳು, ಕೆಳಗೆ ಬಿದ್ದ ಬಿದುರಿನ ಎಲೆಗಳು ಎಲ್ಲವೂ ಚದುರಿದ್ದವು.

"ಹತ್ತಿರದಲ್ಲಿ ಕುದುರೇ ಏನಾದ್ರು?"
ಇಲ್ಲ ಸ್ವಾಮಿ. ಮನುಷ್ಯನು ಹೋಗುವುದೇ ಕಷ್ಟ ಅಲ್ಲಿ. ಇನ್ನು ಕುದುರೆ ಎಲ್ಲಿಂದ ಬರಬೇಕು.

ನ್ಯಾಯಾಧೀಶರಿಗೆ ಬೌದ್ಧ ಪರಿವ್ರಾಜಕನು ಕೊಟ್ಟ ಹೇಳಿಕೆ:

ಹೊತ್ತು? ನೆನ್ನೆ ಮಧ್ಯಾಹ್ನದ ವೇಳೆ ಸ್ವಾಮಿ. ಆ ನತದೃಶ್ಟ ಸೇಕಿಯಾಮದಿಂದ ಯಾಮಶಿನ ಹಾದಿ ಹಿಡಿದ್ದಿದ್ದ. ಸೇಕಿಯಾಮ ಕಡೆಗೆ ಕುದುರೆ ಮೇಲೆ ಸವಾರಿಮಾಡುತ್ತ, ಒಬ್ಬಳು ಹೆಂಗಸಿನ ಜೊತೆ ಸಾಗಿದ್ದ. ಈಗ ಅವಳು ಅವನ ಪತ್ನಿ ಎಂಬುದು ತಿಳಿದಿದೆ. ಸೆರಗು ಅಡ್ಡ ಹಾಯ್ದದ್ದರಿಂದ ಮುಖ ಕಾಣಿಸುತ್ತಿರಲ್ಲಿಲ್ಲ. ನನಗೆ ಅವಳ ಬಟ್ಟೆಯ ರಂಗೊಂದೆ ಕಂಡದ್ದು -- ಕಂದು ಬಣ್ಣದ ನಿಲುವಂಗಿ. ನೀಳವಾದ ಕೇಸರ ಗಳುಳ್ಳ ಅಶ್ವಾರೂಢಳಗಿದ್ದಳು. ಆ ಮಹಿಳೆಯ ಎತ್ತರ? ಒಹ್! ಸುಮಾರು ನಾಲ್ಕು ಅಡಿ ಐದು ಅಂಗುಲ. ನಾನು ಬೌದ್ಧ ಭಿಕ್ಷುವಾಗಿರುವುದರಿಂದ ಅವಳ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಆ ಮನುಷ್ಯ ಖಡ್ಗಧರಿಸಿ ಸಶಸ್ತ್ರನಾಗಿರದೆ ಬಿಲ್ಲು ಬಾಣಗಳನ್ನು ಸಹ ಹೊತ್ತಿದ್ದ. ಮತ್ತೆ ಹೇಳುವುದಾದರೆ ಸರಿಸುಮಾರು ಇಪ್ಪತ್ತು ಬಿಲ್ಲಿಗಳನ್ನು ತನ್ನ ಬತ್ತಳಿಕೆಯಲ್ಲಿ ತುಂಬಿದ್ದ.
ಆತನು ಇಂತಹ ದುರ್ವಿಧಿಯನ್ನು ಸಂಧಿಸುತ್ತಾನೆಂದು ನಾನು ಎಣಿಸಿರಲಿಲ್ಲ. ನಿಜಕ್ಕು ಮಾನವ ಜೀವನ ಬೆಳಗಿನ ಮಂಜಿನಷ್ಟೆ ಸಾಶ್ವತ, ಮಿಂಚಿನ ಬಳ್ಳಿಯಷ್ಟೆ ಚಿರಾಯು. ಅವನ ಮೇಲಿನ ನನ್ನ ಸಹಾನುಭೂತಿಗೆ ಪದಗಳು ಸಾಕಾಗುವುದಿಲ್ಲ.

Sunday, August 15, 2010

ಕಲಿಕೆ

ನಾನಾ ಭಾವೋಪ ಸಂಪನ್ನಂ ನಾನಾ ಅವಸ್ಥಾಂತರಾತ್ಮಕಂ
ಲೋಕ ವೃತ್ತಾನು ಕರಣಂ ನಾಟ್ಯಮೇತನ್ಮಯಾಕೃತಂ

ಕುತೋವಾ ನೂತನಂ ವಸ್ತು ಅಯಂ ಉತ್ಪ್ರೇಕ್ಷಿತಾಂಕ್ಷಮಾಃ
ವಸ್ತ ವೈನ್ಯಾಸ ವೈಚಿತ್ರ್ಯಂ ಮಾತ್ರ ಮತ್ರ ವೈಚಾರ್ಯತಾಂ -- ಜಯಂತ ಭಟ್ಟ

ಸರ್ವೇ ನವ ಇವಾ ಭಾಂತಿ ಮಧುಮಾಸ ಇವ ಧೃಮಾಃ - ಆನಂದವರ್ಧನ

Saturday, August 07, 2010

ಯಾತ್ರೆ ಮುಗಿಸಿದ ’ನಡೆದಾಡುವ ಕಾವ್ಯಕೋಶ’



ದ.ರಾ.ಬೇಂದ್ರೆ ಕಾವ್ಯ ಕುರಿತ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಇಹಲೋಕ ತ್ಯಜಿಸುವ ಕೆಲ ಘಂಟೆಗಳ ಮುನ್ನ ’ನಡೆದಾಡುವ ಕಾವ್ಯ ಕೋಶ’ ಎಂದು ಖ್ಯಾತರಾಗಿರುವ - ಕಿ.ರಂ. ನಾಗರಾಜ.

ಕಿತ್ತಾನೆ ರಂಗಪ್ಪ ನಾಗರಾಜ (ಕಿ.ರಂ.ನಾಗರಾಜ) ಇನ್ನಿಲ್ಲ. ನೆನ್ನೆಯಷ್ಟೆ ಸಂಚಯ ಮತ್ತು ಸುಚಿತ್ರ ಕಲಾ ಕೇಂದ್ರ ಆಯೋಜಿಸಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಸಹೃದಯರನ್ನು ಬೇಂದ್ರೆ ಕಾವ್ಯದಲ್ಲಿ ತಲ್ಲೀನರಾಗಿಸಿದ್ದ ಗಾರುಡಿಗ ಇಲ್ಲವೆಂದರೆ ನಜಕ್ಕೂ ನಂಬಲಾಗತ್ತಿಲ್ಲ. ’ಜೋಗಿ’ ಪದ್ಯವನ್ನು ಓದಬೇಕೆಂದು ಅವರು ಗುರುತು ಹಾಕಿಕೊಂಡು ಬಂದಿದ್ದರೂ, ಅವರ ನೆನ್ನೆಯ ಮನೋಧರ್ಮಕ್ಕೆ ಕಾಕತಾಲೀಯವೆಂಬಂತೆ ಒಲಿದು ಬಂದದ್ದು ಬೇಂದ್ರೆಯವರ ’ಸೃಷ್ಟಿ - ಪ್ರಳಯ’ ಕವನ. ಪ್ರತಿಯೊಂದು ಕ್ಷಣದಲ್ಲಿಯೂ ಸೃಷ್ಟಿ ಮತ್ತು ಪ್ರಳಯಗಳು ಬದಿ ಬದಿಯಲ್ಲಿಯೇ ಹೇಗೆ ಸುಳಿದಾಡುವವು ಎಂದು ತಮ್ಮ ಜೀವನದ ಅಂತಿಮ ಉಪನ್ಯಾಸದಲ್ಲಿ ಕಿ.ರಂ. ಮಾರ್ಮಿಕವಾಗಿ ನುಡಿದಿದ್ದರು. ಆ ಕ್ಷಣದಲ್ಲಿ ಶ್ರುಷ್ಟಿಯಾದ ಕಾವ್ಯ ವೃಷ್ಟಿ, ಇನ್ನು ಕೆಲವ ಘಂಟೆಗಳಲ್ಲಿ ಲಯವಾಗಿ, ಪ್ರಳಯವಾಗುತ್ತದೆಂದು ಕನಸು ಮನಸುನಲ್ಲೂ ನೆನೆಸಿರಲಿಲ್ಲ. ಕಾವ್ಯವನ್ನು ಅನುಭವಿಸಬೇಕೆಂದಿದ್ದರಷ್ಟೆ. ಸೃಷ್ಟಿ ಪ್ರಳಯಗಳ ಅನುಭವ ಮಾಡಿಸಿ ತೀರಿಕೊಂಡರು. ಉಪನ್ಯಾಸದ ಕೊನೆಯಲ್ಲಿ, -- " ನಾನು ನಿಮಗೆ ಹೇಳಬೇಕಾದುದು ಏನೂ ಇಲ್ಲ. ಈ ಕೆಲ ಘಂಟೆಗಳಲ್ಲಿ ನನ್ನ ಭಾವಮಂಡಲದಲ್ಲಿ ಸುಳಿದಾಡಿದ ಹಲವು ಲಹರಿಗಳ ಕುರಿತಾಗಿ ನನಗೆ ನಾನೆ ಮಾತನಾಡಿಕೊಂಡಿದ್ದೇನೆ. you people have just overheard " ಎಂದು ನುಡಿದಿದ್ದರು.

.

Saturday, July 31, 2010

ಅಪರಿಗ್ರಹ


ನಾಡು ಕಂಡಂಥ ಅತ್ಯಂತ ಉನ್ನತ ಶ್ರೇಣಿಯ ಚಿತ್ರಕಾರ, ಶಿಲ್ಪಿ, ಕಲಾ ತಪಸ್ವಿ ಶ್ರೀಯುತ ಕೆ.ವೆಂಕಟ್ಟಪ್ಪನವರು. ಇಲ್ಲಿ ’ಕಲಾ ತಪಸ್ವಿ’ ಎಂಬ ಪದಪ್ರಯೋಗ ಅತಿಶಯೋಕ್ತಿಯಾಗಲಿ, cliche ಯಾಗಲಿ ಅಲ್ಲದೆ ಸಂಧಬೋಚಿತವಾಗಿದೆ. ತಮ್ಮ ಜೀವನವನ್ನು ಕಲೆಗಾಗಿಯೇ ಮುಣುಪಾಗಿಟ್ಟು ಭೀಶ್ಮ ಪ್ರತಿಙ್ಜ್ನೆಯಂತೆ ಜೀವನ್ದುದ್ದಕ್ಕೂ ಅಖಂಡ ಬ್ರಹ್ಮಚರ್ಯೆ ಮತ್ತು ಅಪರಿಗ್ರಹದ ವ್ರತವನ್ನು ಸಾಧಿಸಿದ ಧೀಮಂತರು. ೧೯೧೩ ರಲ್ಲಿ ಅವರು ಹಿಮಾಲಯದ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಅಪರಿಗ್ರಹದ ದೀಕ್ಷೆ ಸ್ವೀಕರಿಸಿದರು. ಯಾರಿಂದಲು ಯಾವುದೇ ರೀತಿಯ ಸಹಾಯವಾಗಲಿ, ಉಡುಗೊರೆಯಾಗಲಿ ಏನನ್ನೂ ಸ್ವೀಕರಿಸದ ವ್ರತವದಾಗಿತ್ತು.

೧೯೪೨ ರಲ್ಲಿ ದಿವಾನ್ ಬಹಾದ್ದೂರ್ ಪಿ. ರಾಘವೇಂದ್ರ ರಾಯರ ಮನೆಗೆ ಹೋಗಿದ್ದರು. ದಿವಾನರು ವೆಂಕಟ್ಟಪ್ಪನವರಿಗೆ ಬೀಳ್ಕೊಡುವಾಗ ತಾಂಬೂಲಾದಿಗಳನ್ನು ಸ್ವೀಕರಿಸಲು ಹೇಳಿದರು. ಆದರೆ ವೆಂಕಟಪ್ಪನವರು ಅಪರಿಗ್ರಹ ವ್ರತದಿಂದ ತಾಂಬೂಲವನ್ನೂ ಸ್ವೀಕರಿಸಲಿಲ್ಲ. ಕೊನೆಗೆ ದಿವಾನರ ಒತ್ತಾಯದ ಮೇರೆಗೆ, ಬೇರೆ ಇನ್ನಾರಿಗಾದರೂ ವೆಂಕಟಪ್ಪನವರು ತಾಂಬೂಲವನ್ನು ದಾನಮಾಡಲು ಅನುವು ಮಾಡಿಕೊಟ್ಟರೆ ತೆಗೆದುಕೊಳ್ಳುವುದಾಗಿ ಹೇಳಿದರು. ( ಶ್ರೀಯುತರ ದಿನಚರಿಯ ೧೭ ಸೆಪ್ಟೆಂಬರ್ ೧೯೪೨ ದಾಖಲಿಸಲಾಗಿದೆ.)

ಅಂತೆಯೆ ೧೯೫೦ ವಿನಾಯಕ ಚತುರ್ಥಿಗೆ ವೆಂಕಟ್ಟಪ್ಪನವರ ತಂಗಿ ಮೋದಕಗಳನ್ನು ತಂದುಕೊಡಲು ಅವರು ರೂಪಾಯಿ ದಕ್ಷಿಣೆ ಕೊಟ್ಟೆ ಅದನ್ನು ಸ್ವೀಕರಿಸಿದರು. ಮೋದಕವು ಹಾಗಿರಲಿ, ಒಮ್ಮೆ ವೆಂಕಟಪ್ಪವನರಿಗೆ ರುಚಿಸುವ ಹೇರಳೇಕಾಯಿ ಉಪ್ಪಿನಕಾಯನ್ನು ಅವರ ತಂಗಿ ತಂದುಕೊಟ್ಟರೆ, ಒಂದು ಶೀಶೆ ಉಪ್ಪಿನಕಾಯಿಗೆ ಮುಕ್ಕಾಲು ಸೇರು ಗೋಧಿಯನ್ನು ಕೊಟ್ಟು ತೆಗೆದುಕೊಂಡರು. ( ದಿನಚರಿ ದಾಖಲು: ೨೩ ಅಕ್ಟೋಬರ್ ೧೯೫೦)

ಈ ತಲೆಮಾರಿನ ಕಲಾವಿದರಿಗೆ (ಯಾರಿಗೆ ಆಗಲಿ) ಈ ಮಟ್ಟದ ನಿಸ್ಪೃಹತೆ ಇರಲು ಸಾಧ್ಯವೇ?

Monday, June 21, 2010

ಮಸಾಲಾಪುರಿ ಮತ್ತು ಅಷ್ಟಾವಧಾನ

೧೫ ಡಿಸೆಂಬರ್ ೧೯೯೧ರ ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ಸಂಪೂರ್ಣ ಶತಾವಧಾನದಲ್ಲಿ ಶತಾವಧಾನಿ. ಡಾ | ರಾ. ಗಣೇಶ್ ಅವರು ಕನ್ನಡ ದತ್ತಪದಿಯಲ್ಲಿ , ’ಮಸಾಲ ಪೂರಿ’ ಮತ್ತು ’ಪಾನಿ ಪುರಿ’ ಪದಗಳನ್ನು ಬಳಸಿ ರಚಿಸಿದ ಊರ್ಮಿಳೆ ಬಗೆಗಿನ ಪದ್ಯ

ವಿದೇಹನರಪಾಟವೀಕುಸುಮಮಸಾಲವಲ್ಲೀಸಮಳ್
ಸದಾ ನಿಯಮನಿಷ್ಠುರಳ್ ಸುಶಮೆ ಪೂರಿತಳ್ ಪ್ರೇಮದಿಂ |
ಚಿದಂಶೆ ರಘುಜಾನುಜಪ್ರಿಯೆ ಮನಃಕೃಪಾನೀರದಳ್
ಮದಾಪಹರೆ ಮೈಥಿಲೀತಪನಪೂರಿತಳ್ ಪ್ರೇರಿತಳ್ ||

ಸಾಲ = ಮರ ; ನೀರದ = ಮೋಡ
-----------
ಇನ್ನೊಂದು ಉದಾಹರಣೆಯಲ್ಲಿ ಖಾನಾ, ಪೀನಾ , ಸೋನಾ, ಗಾನಾ ಉಪಯೋಗಿಸಿ ಜೀವನ್ಮುಕ್ತ ವರ್ಣನೆ

ವಿಷಯ ವಿಮುಖಾ ನಾನಾತ್ವೋದ್ಭಾಸಕೇಪಿ ಜಗತ್ತ್ರಯೇ
ಸದಮಲಚಿದಾನಂದಾಪೀನಾತ್ಮತತ್ವಪರಾಯಣಾಃ |
ಸರಸಮನಸೋ ನಾಟ್ಯಾಲೋಕಿಕ್ರಮೇಣ ನಿರಂತರಂ
ಪ್ರಣಯನಪರಾ ಯೋಗಾನಾಗಾ ಜಯಂತಿ ಮುನೀಶ್ವರಾಃ ||

Thursday, May 20, 2010

ವಿದ್ಯಾರಣ್ಯ ಜಯಂತಿ



ಇಂದು ವಿದ್ಯಾರಣ್ಯ ಜಯಂತಿ. ವಿಭೂತಿ ಪುರುಷರಾದ ವಿದ್ಯಾರಣ್ಯರು, ದೇಶ ಮತ್ತು ಧರ್ಮ ಸಂಕಷ್ಟದಲ್ಲಿದ್ದಾಗ ಅವತರಿಸಿ, ಜಗತ್ತಿನ ಉದ್ದಗಲಕ್ಕೂ ತನ್ನ ಹಿರಿಮೆಯನ್ನು ಮೆರೆವ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣಕರ್ತರಾದರು

Tuesday, March 16, 2010

ಪ್ರೊ. ಎಂ. ಹಿರಿಯಣ್ಣ



ಪ್ರಾತಃ ಸ್ಮರಣೀಯರಾದಂತಹ ಆಚಾರ್ಯ ಮೈಸೂರು ಹಿರಿಯಣ್ಣನವರ ಭಾವಚಿತ್ರವು ಅಂತರ್ಜಾಲದಲ್ಲೆಲ್ಲೂ ಸಿಗಲಿಲ್ಲ. ಅವರ ಪಟವು ಅಂತರ್ಜಾಲದಲ್ಲಿದ್ದರೆ, ಅಂತರ್ಜಾಲಕ್ಕೇ ಶೋಭೆ ಅಂದು, ಗೋಖಲೆ ಸಾರ್ವಗನಿಕ ಸಂಸ್ಥೆಯವರು ಹೊರತಂದಿರುವ ಸಿ.ಡಿ. ಯೊಂದರ ಮುಖಪುಟದಲ್ಲಿದ್ದ ಹಿರಿಯಣ್ಣನವರ ಚಿತ್ರವನ್ನು ಅಂತರ್ಜಾಲಕ್ಕೆ ಏರಿಸಿದ್ದೇನೆ.

ಚಿತ್ರ ಕೃಪೆ: ಗೋಖಲೆ ಸಾರ್ವಜನಿಕ ಸಂಸ್ಥೆ

Sunday, March 14, 2010

ವಿದ್ಯಾಲಂಕಾರ ಪ್ರೋ. ಸಾ.ಕೃ.ರಾಮಚಂದ್ರ ರಾಯರು



Prof.S.K.Ramachandra Rao



ವಿದ್ಯಾಲಂಕಾರ ಪ್ರೋ. ಸಾ.ಕೃ.ರಾಮಚಂದ್ರ ರಾಯರು




ವಿದ್ಯಾಲಂಕಾರ, ಶಾಸ್ತ್ರಚೂಡಾಮಣಿ, ಸಂಗೀತಕಲಾರತ್ನ, ವಾಚಸ್ಪತಿ ಮುಂತಾದ ಸಾರ್ಥಕ ಅಭಿಧಾನಗಳಿಂದ ಅಲಂಕೃತರಾಗಿರುವ ಪ್ರೋ. ಸಾ. ಕೃ . ರಾಮಚಂದ್ರ ರಾಯರು ನಮ್ಮ ನಾಡಿನ ಬಹುಶೃತ ವಿದ್ವಾಂಸರಲ್ಲಿ ಪ್ರಮುಖರು.ವೇದ,ದರ್ಶನ,ತಂತ್ರ,ಜೈನ,ಬೌದ್ಧ,ಸಂಗೀತ,ಸಾಹಿತ್ಯ, ಚಿತ್ರ,ಶಿಲ್ಪ,ಆಯುರ್ವೇದ ಮುಂತಾದ ಹತ್ತು ಹಲವು ಶಾಖೆಗಳಲ್ಲಿ ಪರಿಣಿತರು. ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಕೃತಿಗಳು ಇವರಿಂದ ಹೊರಮೊಮ್ಮಿದವು.

Sunday, February 28, 2010

ಗೋಖಲೆ ಸಾರ್ವಜನಿಕ ಸಂಸ್ಥೆ

ಗೋಖಲೆ ಸಾರ್ವಜನಿಕ ಸಂಸ್ಥೆ ಹೊರತಂದಿರುವ ಧ್ವನಿ ಸುರಳಿಗಳಲ್ಲಿ ಈ ಕೆಳಕಂಡ ಎಂ.ಪಿ. ಗಳು ನನ್ನ ಬಳಿ ಇವೆ. ಆಸಕ್ತರೆಲ್ಲರು ಸೇರಿ ಒಂದು ಶ್ರಾವ್ಯ ಸಂಗ್ರಹಾಲಯ (ಆಡಿಯೋ ಲೈಬ್ರರಿ) ಮಾಡಬಹುದು. ಇದಕ್ಕೆ ಕೈ ಜೋಡಿಸಬೇಕೆಂದಿರುವವರು ನನ್ನನ್ನು ಸಂಪರ್ಕಿಸಿ.

ಪಾಶುಪತಾಸ್ತ್ರ ಪ್ರದಾನ - ಕಾವ್ಯವಾಚನ ಮತ್ತು ವ್ಯಾಖ್ಯಾನ - ಭಾಗ ೧,೨. ಮೂರ್ತಿದ್ವಯರು.
ಅನಂದವರ್ಧನನ ಧ್ವನ್ಯಾಲೋಕ.
ಆನಂದಮಯ ಜೀವನ
ಶಾಕುಂತಲಂ
ಕಾಳಿದಾಸನ ಮೇಘದೂತಂ
ಕುಮಾರಸಂಭವ.
ಮೃತ್ ಶಕಟಿಕ
ರಾಮಾಯಣದ ಕೆಲವು ಸ್ವಾರಸ್ಯಗಳು.
ವಿಭೂತಿಪುರುಷ ವಿದ್ಯಾರಣ್ಯ.
ವೇದಮಂತ್ರ ಪರಿಚಯ.
ವಿವೇಕ ಚೂಡಾಮಣಿ - ಭಾಗ - ೧
ಭಾರತೀಯ ಸಂಸ್ಕೃತಿಗೆ ಯಾಙ್ನ್ಯವಲ್ಕ್ಯರ ಕೊಡುಗೆ.
೨೧. ಭೈರಪ್ಪನವರ ಕಾದಂಬರಿಗಳು
೨೨. ಬುದ್ಧನ ಜೀವನ ದರ್ಶನ.
೨೩.ಶ್ರೀಮದ್ಭಾಗವತ - ಶ್ರೀ ನಾರಾಯಣಾಚಾರ್ಯ.
೨೪. ಸಂಸ್ಕೃತ ಕವಿಗಳ ಕೃಷ್ಣಕಾವ್ಯ.
೨೫.ಮಹಾಭಾರತ - ಉದ್ಯೋಗಪರ್ವ
ಜೈಮಿನಿ ಭಾರತ - ವಾಚನ ವ್ಯಾಖ್ಯಾನ - ಡಾ|| ನಾಗವಲ್ಲಿ ನಾಗರಾಜ್ ಪ್ರೊ. ಅ.ರಾ. ಮಿತ್ರ.
ವಿವೇಕ ಚೂಡಾಮಣಿ - ಭಾಗ - ೨
ಭಾರತೀಯ ಸಂಸ್ಕೃತಿಯಲ್ಲಿ ಶಾಸ್ತ್ರ - ಪುರಾಣ-ಕಲೆ-ದರ್ಶನ.
೫.ರಾಗಾನುರಾಗ - ಭಾಗ - ೧,೨,೩,೪.
೬. ಕೆಲವು ಸಂಸ್ಕೃತ ನಾಟಕಗಳು.
೭. ಡಿ.ವಿ.ಜಿ. ಯವರ ಗೇಯ ಕೃತಿಗಳ ಗಾಯನ.
೮.ಶಿವಾಪರಾಧ ಕ್ಷಮಾಪಣ ಸ್ತೋತ್ರ - ವಿದ್ವಾನ್. ಗಣೇಶ ಭಟ್ಟ ಹೋಬಳಿ
೯. ಅಕ್ಷಯವಸ್ತ್ರ ಪ್ರದಾನ - ಕಾವ್ಯವಾಚನ ಮತ್ತು ವ್ಯಾಖ್ಯಾನ
ತ್ಯಾಗರಾಜರ ಕೃತಿಗಳಲ್ಲಿ ಆಧ್ಯಾತ್ಮ.
ಬುದ್ಧನ ಜೀವನ ದರ್ಶನ.
ಮಹಾಭಾರತ - ಉದ್ಯೋಗಪರ್ವ
ಸಂಸ್ಕೃತ ಕವಿಗಳ ಕೃಷ್ಣಕಾವ್ಯ.
ಪ್ರೋ. ಎಂ. ಹಿರಿಯಣ್ಣ : ಒಂದು ಕಿರುಪರಿಚಯ

Saturday, January 30, 2010

ಓ ಸೂರ್ಯಕಾಂತಿ!

ವಿಲ್ಯಂ ಬ್ಲೇಕ್ ಕವಿಯ Ah! Sunflower ಕವಿತೆಯನ್ನು ನಾನು ಕನ್ನಡದಲ್ಲಿ ಕೊಲೆ ಮಾಡಿರುವ ಬಗೆ.

ಓ ಸೂರ್ಯಕಾಂತಿ! ಕಾಲನ ಅಧೀನನೆ.
ಸೂರ್ಯ ಸೋಪಾನದ ಜಾಡು ಹಿಡಿದು:
ಆ ಸುಮಧುರ ಸುವರ್ಣ ಸಗ್ಗಕೆ
ಲಗ್ಗೆ ಇಟ್ಟು ಪಯಣಿಗರು ಯಾತ್ರೆ ಮುಗಿಸುವಲ್ಲಿಗೆ

ಆಸೆಗಳ ಸಂಕೋಲೆಯಿಂದ ಬಸವಳಿದ ಜವ್ವನನು
ತುಹಿನದಿಂದಾವರಿಸಿ ಬಾಡಿದ ನವಸುಮವು
ಸುಪ್ತಾವಸ್ಥೆಯಿಂದ ಸಿಡಿದೆದ್ದು ಹಾತೊರೆದು ಹೊರಡುತಿವೆ
ಎನ್ನ ಸೂರ್ಯಕಾಂತಿ ಚಲಿಸುವಲ್ಲಿಗೆ!


Ah ! Sun-flower weary of time.
Who countest the steps of the Sun:
Seeking after that sweet golden clime
Where the travellers journey is done

Where the Youth pined away with desire,
And the pale Virgin shrouded in snow:
Arise from their graves and aspire,
Where my Sun-flower wishes to go!


- William Blake : Songs of Experience in 1794.

Tuesday, December 29, 2009

ರಸಋಷಿಗೆ ಶ್ರೀಸಾಮಾನ್ಯನ ನಮನ


ಶ್ರೀಸಾಮಾನ್ಯ, ನೇಗಿಲಯೋಗಿ , ಬೆಳ್ಳಿಹಬ್ಬ, ಸುತ್ತೋಲೆ - ದಿನನಿತ್ಯದ ಬಳಕೆಯ ಈ ಪದಗಳಲ್ಲಿ ಒಂದು ಸೋಜಿಗದ ಸ್ವಾರಸ್ಯವಿದೆ. ಅದೇನೆಂದು ನಿಮಗೆ ಗೊತ್ತೇ? ಈ ಪದಗಳನ್ನು ಕನ್ನಡಕ್ಕೆ ನೀಡಿದವರು ಕುವೆಂಪು.ಇವೆಲ್ಲ ಪದಸೃಷ್ಟಿಗಳ ಜನಕನಿಗಿಂದು ಜನುಮದಿನ. ಈ ಬ್ಲಾಗಿನಲ್ಲಿ ಶ್ರೀಸಾಮನ್ಯನೆಂದು ನಾಮಕರಣ ಮಾಡಿಕೊಂಡಿರುವ ನಾನು ಪದಜನಕನಿಗೆ ಶ್ರದ್ಧಾಂಜಲಿ ಕೊರಲೇ ಬೇಕಲ್ಲವೇ.

ಕುವೆಂಪು ಅವರ ವಿಶ್ವಮಾನವ ಸಂದೇಶ

ಮನುಜ ಮತ , ವಿಶ್ವ ಪಥ, ಸರ್ವೋದಯ, ಸಮನ್ವಯ ಪೂರ್ಣದೃಷ್ಟಿ ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಬೇಕಾದುದು ಆ ಮತ ಈ ಮತ ಅಲ್ಲ; ಮನುಜ ಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಸಂಕುಚಿತ ಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ

Monday, October 26, 2009

ಎರವಲು

ನನ್ನದಲ್ಲದ ಜೀವಿತವ
ನನದೆಂದು ನಾ ತಿಳಿದು
ದಿನ ದಿನವು ನನ್ನಿಯನೆ
ನನ್ನೆದೆಗೆ ಉಣಿಸಿ

ಒಲ್ಲದಾತ್ಮನ ತಣಿಸೆ
ಬಗೆಬಗೆಯ ಅಮಿಷವ
ಒಡ್ಡುತಲಿ ದಡ್ಡತನದಿ
ಬದುಕಲೆಂತಾಗುವುದು ತಿಳಿಸಿ

Tuesday, September 29, 2009

ಮುಗ್ಧತೆಯ ಮಾರಣಹೋಮ

--- Still in Draft Phase ---

ನನ್ನ ಜೀವನದಲ್ಲಿ ಒಂದು ಕಾಲ ಇತ್ತು -- ಸೌಂದರ್ಯ ಅನ್ನೊದಕ್ಕೆ ತನ್ನದೆ ಆದ ವಿಶಿಷ್ಟ ಸ್ಥಾನ ಇದ್ದ ಕಾಲ ಅದು.ಬಹುಶಃ ನನಗಾಗ ಆರೇಳು ವರ್ಷ ಇದ್ದಿರಬಹುದು.ಆ ಅನಾಥಾಶ್ರಮ ನನ್ನನ ಶಾಶ್ವತವಾಗಿ ಮುಪ್ಪಿಗೇರ್ಸಕ್ಕಿಂತ ಕೆಲ ವಾರ ಅಥವಾ ತಿಂಗಳಿಗೆ ಹಿಂದಿನ ಮಾತು ಇದು.ಪ್ರತಿ ಮುಂಜಾನೆ ಬಲಮಗ್ಗಲಲ್ಲಿ ಎದ್ದು,ಒಬ್ಬ ಸಿಪಾಯಿಯ ಹಾಗೆ ಹಾಸಿಗೆಯನ್ನು ಮಡಿಮಾಡಿ,ನೇರ ಮೈದಾನದಲ್ಲಿ ಸಾಲು ಸಾಲಾಗಿ ಗಂಜಿಗೆ ನಿಲ್ಲುತ್ತಿದೆ. ಆ ಶನಿವಾರದ ದಿನ ಟಿಫನ್ ಮಾಡಿ ಮತ್ತೆ ನನ್ನ ಕೊಠಡಿಗೆ ಬಂದು ಇನ್ನೇನು ಕೂರಬೇಕು, ಅಷ್ಟ್ರಲ್ಲಿ ನಮ್ಮ ವಾರ್ಡನ್ ಒಂದು ಹಿಂಡು ರಾಜಾಚಿಟ್ಟೆಗಳನ್ನ ಅಟ್ಟಿಸಿಕೊಂಡು ಹೋಗಿ ಮೈದಾನದ ಹೊರಗೆ ಅಟ್ಟತಾ ಇದ್ದ. ಅಲ್ಲೆ ಅವಿತುಕಂಡು ನೋಡ್ತಾ ಇದ್ದೆ ನಾನು -- ಈ ಪ್ರಾಣಿ ಏನ್ ಮಾಡ್ಥಾನೆ ಅಂತ.ಒಂದೊಂದಾಗಿ ಆ ಸುಂದರ ಚಿಟ್ಟೆಗಳನ್ನ ನೆಟ್ ಇಂದ ತೆಗೆದು ಅವುಗಳ ತಲೆ, ರೆಕ್ಕೆಗಳಿಗೆ ಪಿನ್ನ್ ಗಳನ್ನು ಚುಚ್ಚಿ ಶಿಲುಬೇಗೆ ಏರಿಸ್ತಾ ಇದ್ದ ಆ ಪಾಪಿ. ಒಂದು ಕಾರ್ಡ್ಬೋರ್ಡ್ ತುಂಬ ಅರೆಬರೆ ಸತ್ತ ಚಿಟ್ಟೆಗಳನ್ನ ಸಿಕ್ಕಿಸಿಟ್ಟಿದ್ದ.ಅಷ್ಟು ಸುಂದರವಾಗಿರೋದನ್ನ ಹೇಗಾದರು ಕೊಲ್ಲೋಕ್ಕೆ ಮನಸ್ಸುಬಂತೋ ಆ ದೂರ್ತಂಗೆ! ಆ ಮುರಿದ ರೆಕ್ಕೆಗೆ ನನ್ನ ಉಗುಳು ಹಚ್ಚಿ ಅಂಟು ಹಾಕಕ್ಕೆ ನೋಡಿದೆ.ಮತ್ತೆ ಅದು ಹಾರಿ ಹೋಗಿ ನೀಲಾಕಾಶ ಸೇರಲಿ ಅಂತ.ಆದರೆ ರೆಕ್ಕೆ ಮತ್ತೆ ಅಂಟಲೇ ಇಲ್ಲ. ಅಷ್ಟರಲ್ಲಿ ನನ್ನ ತಲೆಯ ಮೇಲೆ ಏನೋ ಬಡಿದಹಾಗೆ ಆಯ್ತು.ತಲೆ ಎತ್ತಿ ನೋಡಿದರೆ ಆ ರಾಕ್ಷಸ ಬಂದು ನಿಂತಿದ್ದ.ಅದೆ ಕಾರ್ಡಬೋರ್ಡನ್ನ ತಗೆದು ನನ್ನ ತಲೆಗೆ ಎರೆಡು ಏಟು ಹಾಕಿ ಅರಚಾಡಿದ.ನಾನು ಏನೂ ಮಾಡಿಲ್ಲ ಅಂತ ಎಷ್ಟು ಹೇಳಿದರೂ ನನ್ನನ ನಂಬಲಿಲ್ಲ. ತಲೆಗೆ ಹೊಡೆದ ರಭಸದಲ್ಲಿ ಚಿಟ್ಟೆ ತುಂಡುಗಳೆಲ್ಲ ಚಲ್ಲಾಪಿಲ್ಲಿಯಾದ್ವು.ಅಲ್ಲಿ ಬಿದ್ದಿದ್ದ ಕಸವನ್ನ ಎತ್ತಿ ಕಸದತೊಟ್ಟಿಗೆ ಹಾಕಿ ಬರಲು ಹೇಳಿ ಅವನು ಹೋರಟು ಹೋದ.ಅಲ್ಲಿದ್ದ ರಾಶಿಯಲ್ಲಿ ಬಹಳ ಹೊತ್ತು ಕೂತು ಎಲ್ಲ ಚಿಟ್ಟೆಗಳನ್ನು ಮತ್ತೆ ಒಟ್ಟಿಗೆ ಜೋಡಿಸಿ ಒಮ್ಮೆಲೆ ಮಣ್ಣು ಮಾಡುವ ಎಂದು ಯೋಚ್ಸಿದೆ.ಆದರೆ ಆಗಲಿಲ್ಲ.ಅವುಗಳ ಸಲುವಾಗಿ ಪ್ರಾರ್ಥನೆ ಮಾಡಿ ನನ್ನ ಹಳೆ ಚೀಲದಲ್ಲಿ ಹಾಕಿ ಮಣ್ಣು ಮಾಡಿದೆ.ಪ್ರತಿವರುಷವೂ ಚಿಟ್ಟೆಗಳು ನಮ್ಮ ಅನಾಥಾಲಕ್ಕೆ ಬಂದಾಗ ನಾನೇ ಅವುಗಳನ್ನು ಹೊರದೂಡುವೆ.ಈ ಸ್ಥಳ ಬದುಕುವುದಕ್ಕೆ ಒಳ್ಳೆಯದಲ್ಲ -- ಸಾಯುವುದಕ್ಕಂತು ಅಲ್ಲವೇ ಅಲ್ಲ ಅನ್ನುವುದು ಆ ಬಡಪಾಯಿಗಳಿಗೆ ಇನ್ನು ತಿಳಿದಿಲ್ಲ.

Thursday, July 30, 2009

ಉಲ್ಬಣ

ಚಿವುಟಿ ಸ್ರವಿಸಬೇಕೆನಿಲ್ಲ
ಹೆಪ್ಪುಗಟ್ಟಿದ ನೋವನ್ನು.
ಒಳಕಾವೇರಿ ಉಕ್ಕುಕ್ಕಿ
ಕೀವು ಕಟ್ಟಿ ತನ್ತಾನೆ
ತೊಟ್ಟಿಕ್ಕುತಿರಲು,
ಚಿವುಟಬೇಕೆನಿಲ್ಲ.

Saturday, June 27, 2009

ಮುದ್ದಣ್ಣ ಕಂಡ ಕವಿ

ಬಕನ ಗುಣವೊಂದು ಮರ್ಕತನದೊಂದಜನ ಮೂ
ಶಕನ ಲಕ್ಷಣಗಲೋಳಗೊಂದೊಂದು ಮೆನ್ ಪಿಪೀ
ಲಿಕನ ಶುನಕನ ಮಾನ ಸುಕಸನ ಚಿತ್ರಕಾಯನ ಗುನಗಲೋಳಗದೊಂದು
ಪಿಕನ ಚಿತ್ರಿಕನ ಮರುಲನ ವಿದೂಷಕನ ವ
ರ್ತಕನ ಸಲ್ಲಕ್ಷನಗಲೊಂದೆರದನ್ದೆಸೆಯ
ಲಕಲಂಕ ಕೀರ್ತಿಯಿಮ್ದೊಪ್ಪಿರ್ಪನಾ ಕವಿಯೇ ಲೋಕಮಿರ್ಪನ್ನೆವರೆಗಂ
- ನಂದಳಿಕೆ ಲಕ್ಷ್ಮೀ ನಾರಣಪ್ಪ


'ರವಿ ಕಾಣದ್ದನ್ನು ಕವಿ ಕಂಡ' ; 'ಬ್ರಹ್ಮನದ್ದು ಸೃಷ್ಟಿ ಕವಿಯದ್ದು ಮರು ಸೃಷ್ಟಿ' -- ಇಂತೆಲ್ಲ ಕವಿವರ್ಯರನ್ನು ಹಾಡಿ ಹೊಗಳಿ ಬ್ರಹ್ಮಾದಿತ್ಯಾದಿಗಳಿಗಿಂತ ಉನ್ನತ ಹೇಮಪೇಠದಲ್ಲಿಟ್ಟು ಕೊಂಡಾಡಿದ್ದಾರೆ. ಆದರೆ ಮುದ್ದಣ್ಣನವರು ಕವಿಯನ್ನು ಕಪಿ,ಬಕ ಮುಂತಾದ ಪ್ರಾಣಿ ಪಕ್ಷಿಗಳಿಗೆ ಹೋಲಿಸಿರುವುದು ಈ ಮೇಲಿನ ಪದ್ಯದ ಸ್ವಾರಸ್ಯ.

Wednesday, May 27, 2009

ಪುರುಷಪ್ರಗತಿಯಂತು ಮಂಕುತಿಮ್ಮ

ಅಸುರರು ಅಮ್ರುತತ್ವವನ್ನು ಅರಸಿ ಬ್ರಹ್ಮಾದಿ ದೇವತೆಗಳಿಂದ ನಾನಾ ವಿಧವಾದ ವರಗಳನ್ನು ಪಡೆದು ಸಾವನ್ನೇ ಗೆಲ್ಲುವ ವ್ಯರ್ಥ ಪ್ರಯತ್ನಕ್ಕಿಳಿದ ಪ್ರಸಂಗಗಳನ್ನು ನಾವು ಭಸ್ಮಾಸುರ,ತಾರಕಾಸುರ, ಹಿರಣ್ಯರ ವೃತ್ತಾಂತದಲ್ಲಿ ಕಂಡಿದ್ದೇವೆ. ಪ್ರಾಚೀನ ಗ್ರೀಕರಲ್ಲಿ ಸಿಸಿಫಸನೆಂಬುವವನು ಛಲ ಕಪಟ ಗಳಿಗೆ ಹೆಸರುವಾಸಿಯಾಗಿದ್ದನು. ನಮ್ಮಲ್ಲಿ ಯಮನಿರುವಂತೆ ಗ್ರೀಕರ ಮೃತ್ಯು ದೇವತೆಯನ್ನೇ ಸೆರೆಹಿಡಿದ್ದಿದ್ದ ಭೂಪ ಇವನು. ಇವನ ಕಪಟದ ಕುಚೇಷ್ಟೆಗಳನ್ನು ತಾಳಲಾರದ ದೇವತೆಗಳು ಇತನಿಗೊಂದು ಶಾಪವನ್ನಿತ್ತರು. ಗಿರಿಯೊಂದರ ಮೇಲೆ ಸಿಸಿಫಸನು ಗೋಲಾಕಾರದ ಬಂಡೆಯೊಂದನು ತಳ್ಳುತ್ತ ಸಾಗಿಸುವುದು. ಬಂಡೆ ಇನ್ನೇನು ಶಿಖರ ಮುಟ್ಟಿತು ಎನ್ನುವಷ್ಟರಲ್ಲಿ ಸರಕ್ಕನೆ ಜಾರಿ ಮತ್ತೆ ಪಾತಾಳ ಸೇರುವುದು. ಸರಿ ಮತ್ತೆ ಪ್ರಾರಂಭವಾಗುವುದು ಸಿಸಿಫಸನು ಬಂಡೆ ಹೊರುವ ಕಾಯಕ. ಹೀಗೆ ಆಚಂದ್ರಾರ್ಕವಾಗಿ ಬಂಡೆ ಹೊರುವ ಕಸ ಅವನ ಪಾಲಾಯಿತು. ಅಂತ್ಯವಿಲ್ಲದೆ,ನಿರರ್ತಕ ಮತ್ತು ವ್ಯರ್ಥವೆನಿಸುವ ಕಾಯಕಕ್ಕೆ ಸಿಸಿಫಸನ ಕಥೆಯು ರೂಪಕ ವಾಯಿತು.

ಕಗ್ಗದಲ್ಲಿ ಗುಂಡಪ್ಪನವರು ಇಂತೆಂದಿದ್ದಾರೆ.

ಗಿರಿಯ ಮೇಲಕೆ ದೊಡ್ಡ ಬಂಡೆಯನು ಸಿಸಿಫಸನು ।
ಉರುಳಿಸಿರಲೊಂದೆರಡು ಮಾರು ಘಾಸಿಯಲಿ ।।
ಸರಿದು ಕೆಳಕದದೆಂತೊ ಜಾರುವುದು ಮರಮರಳಿ ।
ಪುರುಷಪ್ರಗತಿಯಂತು ಮಂಕುತಿಮ್ಮ ।।

ಪ್ರಸ್ತುತ ಬಿಜಾಪುರದ ರವೀಂದ್ರ ಡಿ ನಂದೀಪನ್ನನವರ್ ಎಂಬುವವರು ದಿನಾಲು ಡಿ.ಸಿ. ಕಛೇರಿಯ ಮುಂದೆ ಎಂಟರಿಂದ ಒಂದು ಘಂಟೆ ಮಧ್ಯಾನ್ಹದ ವರೆಗೂ ಹದಿನೈದು ಕೆ.ಜಿ. ತೂಕದ ಕಲ್ಲು ಹೊತ್ತು ನಿಂತಿರುವರಂತೆ. ಇವರ ಅಳಲು ಏನೆಂದರೆ ಭಾರತದಲ್ಲಿ ರಾಷ್ಟ್ರಪತಿ ಮಾದರಿಯ ಪ್ರಜಾಪ್ರಭುತ್ವ ಜಾರಿಗೆ ಬರಬೇಕು. ಅದಕ್ಕಾಗಿ ಸಂವಿಧಾನಕ್ಕೆ ಸೂಕ್ತ ರೀತಿಯಲ್ಲಿ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ ಈ ಕ್ರಮವಂತೆ. ಅಯ್ಯಾ ! ಆರ್ಥಿಕ ಹಿಂಜರಿತ ಮತ್ತು ಭಯೋತ್ಪಾದನೆಯ ಅಟ್ಟಹಾಸದಲ್ಲಿ ಸರ್ಕಾರವನ್ನು ಮರುಚುನಾವಣೆ ಮಾಡಿ ಗದ್ದುಗೆಗೆ ಏರಿಸಿದ ದೇಶ ಇದು. ಇಂತಹುದರಲ್ಲಿ ನಿಮಗೆ ಯಾಕ ಸಿಸಿಫಸನ ಶೋಕಿ.

Friday, April 17, 2009

ಪ್ರಜಾಪ್ರಭುತ್ವ


ತೋರು ಬೆರಳ ಮೇಲೆ ಸಣ್ಣ ಕಪ್ಪದೊಂದು ಗುರುತು
ಪ್ರಜೆಯು ತಾನು ಪ್ರಭುವೆಂಬುದ ಸಾರುತಿಹುದು ಕುಳಿತು.
ಕರ್ತವ್ಯದ ಕರೆಯಿದುವೆ ಹಕ್ಕಿನ ಘನ ಗೆರೆಯಿದುವೆ
ಎದ್ದು ನಿಂತು ಮತವ ನೀಡು ತಾಮಸವನು ಮರೆತು

ಚುನಾವಣೆಯ ಸಮಯ - ನಿಮ್ಮ ಮತ ಚಲಾಯಿಸಲು ಮರೆಯದಿರಿ!

“At the bottom of all the tributes paid to democracy is the little man, walking into the little booth, with a little pencil, making a little cross on a little bit of paper – no amount of rhetoric or voluminous discussion can possibly diminish the overwhelming importance of that point.”
- Sir.Winston Churchill

Friday, April 10, 2009

ರಸಪ್ರವಾಹ

ಬಿರ್ಕಾಶಾ ದೇಶದ ರಾಜ ಸಭೆಗೆ ಲಾವಣ್ಯವತಿಯೂ ಬಹುಶೃತಳೂ ಆದ ಸ್ವರ್ಣಮಾಲಿನಿ ಎಂಬ ನರ್ತಕಿಯು ತನ್ನ ಚಾರಣ ವೃಂದದೊಂದಿಗೆ ಆಗಮಿಸಿದಳು. ರಾಜಕುಮಾರನ ಸಮಕ್ಷಮದಲ್ಲಿ ವೀಣಾಭೇರಿ ಮೃದಂಗಾದಿಗಳ ಗೋಷ್ಠಿಗಂಗೆಯಲ್ಲಿ ಲೀನವಾಗಿ, ಲಾಸ್ಯವೇ ತಾನೆಂಬಂತೆ ನರ್ತಿಸಿದಳು. ಸ್ವರ್ಣಮಾಲಿನಿ ಜ್ವಾಲಮಾಲೆಯಾಗಿ ಜ್ವಾಲೆಯ ನರ್ತನ, ನಕ್ಷತ್ರಾಕಾಶಗಳ ನರ್ತನ -- ಹೀಗೆ ಎಲ್ಲವನ್ನೂ ಚಿತ್ರಬಿಡಿಸಿದಂತೆ ಕಣ್ಣುಕಟ್ಟುವ ಹಾಗೆ ಚಿತ್ರಿಸಿದಳು.ತದನಂತರ ರಾಜಕುಮಾರನ ಬಳಿ ಬಂದು ತಲೆಬಾಗಿ ನಮಸ್ಕರಿಸಿದಳು. ರಾಜಕುಮಾರನು ಇಂತೆಂದನು " ನರ್ತನನಿಧಿಯೇ -- ಲಾಸ್ಯ ಲಾವಣ್ಯಗಳ ಪುತ್ರಿಯಂತಿರುವ ನಿನಗೆ ಈ ಕಲೆಯು ಹೇಗೆ ಒಲಿಯಿತು. ಎಲ್ಲಿಂದ ಅವತರಿಸಿತು? ಪಂಚಭೂತಗಳನ್ನೂ ನಿನ್ನ ಹಾವಭಾವಗಳಲ್ಲಿಯೇ ಹೇಗೆ ಅಡಕವಾಗಿಟ್ಟಿರುವೆ?" ಇದರ ಗುಟ್ಟೇನೆಂದು ಕೆಳಲಾಗಿ, ಸ್ವರ್ಣಮಾಲಿನಿಯು ಇಂತೆಂದಳು -- "ಮಹಾಸ್ವಾಮಿ, ನಿಮ್ಮ ಸವಾಲುಗಳಿಗೆ ನನ್ನ ಬಳಿ ಸಮಂಜಸ ಉತ್ತರಗಳು ಇಲ್ಲ. ಆದರೆ ನನಗೆ ತಿಳಿದಿರುವುದು ಇಷ್ಟೆ: ಒಬ್ಬ ದಾರ್ಶನಿಕನ ಆತ್ಮ ಹೇಗೆ ಶಿರೋಭಾಗದಲ್ಲಿ ಸ್ಥಿತವಾಗಿರುತ್ತದೆಯೋ, ಕಾವ್ಯಾತ್ಮನಾದ ಕವಿಯ ಆತ್ಮವು ಹ್ರುದ್ಭಾಗದಲ್ಲಿ ನೆಲೆಸಿರುತ್ತದೆಯೋ, ಗಾಯಕಮಾನ್ಯರ ಸರ್ವಸ್ವವೂ ಕಂಠದಲ್ಲಿ ಸ್ಥಾಪಿತವಾಗಿದೆಯೋ,ಹಾಗೆ ನರ್ತಕನ ಆತ್ಮವು ಅಣು ಅಣುವಿನಲ್ಲೂ ರಸಪ್ರವಾಹವಾಗಿ ಸಂಚರಿಸುತ್ತದೆ."

---
** ಭಾವಾನುವಾದ Adapted from Kahlil Gibran.