Saturday, June 29, 2013

ನ್ಯಾಯ ಸ್ವಾರಸ್ಯ



ಸಂಸ್ಕೃತ ಭಾಷಾ ಸಾಗರದಲ್ಲಿ ಮಾತನ್ನು ಮಾಣಿಕ್ಯ ಮಾಡುಲು  ಸಮರ್ಥವಾದ  ಹಲವಾರು "ನ್ಯಾಯ" ಗಳು ಇವೆ. ಉದಾಹರಣೆಗೆ ಹಂಸಕ್ಷೀರ ನ್ಯಾಯ, ಕಾಕತಾಳೀಯ ನ್ಯಾಯ, ಮಂಡೂಕ ತೋಲನ ನ್ಯಾಯ ಇತ್ಯಾದಿ. ನಮ್ಮ ಆಡು ಭಾಷೆಯಲ್ಲಿ ಪ್ರಯೋಗಿಸುವ  ಈ ನ್ಯಾಯಗಳಿಂದ ಭಾಷೆಗೆ ಒಂದು ರೀತಿ ಸ್ವಾರಸ್ಯ, ಮೆರುಗು ದೊರೆಯುವುದರಲ್ಲಿ ಸಂಶಯವೇ ಇಲ್ಲ. ಉಪಮೆಗಳ ಸಮ್ಯಗ್ಪ್ರಯೋಗದಿಂದ ಅರ್ಥ ಸ್ಪಷ್ಟತೆ ಕೂಡ ಉಂಟಾಗುತ್ತದೆ. ಕೆಲವು ನ್ಯಾಯಗಳು ಆಡುಭಾಷೆಯ ಹಾಸು ಹೊಕ್ಕಾಗಿವೆ.

ಈಗ ಒಂದೆರಡು ನ್ಯಾಯಗಳನ್ನು ಪರಿಶೀಲಿಸೋಣ:
ಪೀಲು ಪತ್ರ ಫಲ ನ್ಯಾಯ: ಪೀಲು ಎಂಬುದು ಭರತವರ್ಷದಲ್ಲಿ ಕಂಡು ಬರುವ ಒಂದು ಸಸ್ಯ ಜಾತಿಯ ಪ್ರಬೇಧ. ಪೀಲುವಿನಲ್ಲಿ ಎಲೆಗಳು ಬಹಳ ಕಹಿ. ಆದರೆ ಹಣ್ಣುಗಳು ಮಾತ್ರ ಅಷ್ಟೇ ಸಿಹಿ. ಹೀಗೆ ಒಂದೇ ತರುವಿನಲ್ಲಿ ಸಿಹಿ ಮತ್ತು ಕಹಿ ಅಡಕವಾಗಿರುವಾಗ ಪೀಲು ಪತ್ರ ಫಲ ನ್ಯಾಯ ವನ್ನು ಉಲ್ಲೇಖಿಸುತ್ತೆವೆ. ರಾವಣ ವಿಭೀಷಣರು ಒಂದೇ ತಾಯಿ ಮಕ್ಕಳಾಗಿಯೂ ವ್ಯತಿರಿಕ್ತ ಮನೋಭಾವದವರಾಗಿದ್ದ ಹಾಗೆ.